ಹೊಸದಿಗಂತ ವರದಿ ಬೆಂಗಳೂರು:
ಸುಪ್ರಸಿದ್ಧ ಬಾಹ್ಯಾಕಾಶ ವಿಜ್ಞಾನಿ ಡಾ. ಕಸ್ತೂರಿರಂಗನ್ ಅವರ ನಿಧನದಿಂದ ಭಾರತದ ರಾಷ್ಟ್ರಜೀವನದಲ್ಲಿ ಒಂದು ದೇದೀಪ್ಯಮಾನ ನಕ್ಷತ್ರದ ಅಸ್ತಂಗತವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್.ಎಸ್.ಎಸ್.)ವು ತೀವ್ರ ಸಂತಾಪ ಸೂಚಿಸಿದೆ.
ಆರ್.ಎಸ್.ಎಸ್. ಸರಸಂಘಚಾಲಕ ಡಾ. ಮೋಹನ್ ಭಾಗ್ವತ್ ಮತ್ತು ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಸಂತಾಪ ಸಂದೇಶ ಬಿಡುಗಡೆ ಮಾಡಿದ್ದಾರೆ.
ಪದ್ಮವಿಭೂಷಣ ಪುರಸ್ಕೃತ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮಾಜಿ ಅಧ್ಯಕ್ಷ ಡಾ.ರಂಗನ್ ಅವರು ವೈಜ್ಞಾನಿಕ ಕ್ಷೇತ್ರದಲ್ಲಿ ವೈಶ್ವಿಕ ಸ್ತರದ ದಿಗ್ಗಜರಾಗಿದ್ದರು. ಅದರ ಜೊತೆಗೆ ರಾಜ್ಯಸಭಾ, ಯೋಜನಾ ಆಯೋಗದಂತಹ ವಿವಿಧ ಕ್ಷೇತ್ರಗಳಲ್ಲಿ ಅವರು ರಾಷ್ಟ್ರದ ಸೇವೆ ಮಾಡಿದ್ದಾರೆ. ಅವರು ಬಾಹ್ಯಕಾಶ ಕ್ಷೇತ್ರಕ್ಕೆ ನೀಡಿದ ಸೇವೆಗೆ ಸಮಾನವಾಗಿ ಭಾರತದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಿರ್ಮಿಸುವುದರಲ್ಲಿ ಹಾಗೂ ಅನುಷ್ಠಾನಗೊಳಿಸುವುದರಲ್ಲಿ ಕೊಡುಗೆ ನೀಡಿರುವುದು ಒಂದು ಐತಿಹಾಸಿಕ ಸಾಧನೆಯಾಗಿದೆ. ವಿಜ್ಞಾನಿ, ನೀತಿ ನಿರ್ಮಾತೃ, ಶಿಕ್ಷಣತಜ್ಞ, ಪರಿಸರತಜ್ಞ ಹೀಗೆ ಹಲವು ಭೂಮಿಕೆಗಳಲ್ಲಿ ಪ್ರಭಾವಿಯಾಗಿ ಕಾರ್ಯನಿರ್ವಹಿಸಿದ ಡಾ. ಕಸ್ತೂರಿರಂಗನ್ ಅವರು ಉದಾತ್ತ ಮಾನವತಾವಾದಿ ಮತ್ತು ಸಂವೇದನಾಶೀಲ ವ್ಯಕ್ತಿಯಾಗಿದ್ದರು ಎಂದು ಉಭಯರು ಬಣ್ಣಿಸಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರವಾಗಿ, ಡಾ. ಕಸ್ತೂರಿರಂಗನ್ ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನಮ್ಮ ಹೃತ್ಪೂರ್ವಕ ಸಂತಾಪಗಳನ್ನು ವ್ಯಕ್ತಪಡಿಸುತ್ತೇವೆ. ಅಂತಹ ಮಹಾನ್ ದೇಶಭಕ್ತನಿಗೆ ನಾವು ಶ್ರದ್ಧಾಂಜಲಿಯನ್ನು ಸಲ್ಲಿಸುತ್ತೇವೆ. ಅಗಲಿದ ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಎಂದು ಡಾ. ಮೋಹನ್ ಭಾಗ್ವತ್ ಮತ್ತು ದತ್ತಾತ್ರೇಯ ಹೊಸಬಾಳೆ ತಿಳಿಸಿದ್ದಾರೆ.