ಹೊಸದಿಗಂತ ವರದಿ ಹುಬ್ಬಳ್ಳಿ:
ಧಾರವಾಡ ಲೋಕಸಭಾ ಕ್ಷೇತ್ರದ ಎಲ್ಲಾ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಬಣ್ಣ ದರ್ಪಣೆ ಎಂಬ ಶೀರ್ಷಿಕೆ ಅಡಿಯಲ್ಲಿ ಬಣ್ಣ ಹಚ್ಚುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ನನ್ನ ಪರಿಕಲ್ಪನೆಯಾಗಿದೆ. ಈ ಅಭಿಯಾನಕ್ಕೆ ಅ. 29 ರಂದು ಸಂಜೆ 6 ಕ್ಕೆ ಕುಂದಗೋಳ ಪಟ್ಟಣದ ಶ್ರೀ ಹರಭಟ್ಟ ಶಾಲಾ ಮೈದಾನದಿಂದ ಅಧಿಕೃತವಾಗಿ ಚಾಲನೆ ನೀಡಲಾಗುವುದು. ಮುಖ್ಯ ಅತಿಥಿಗಳಾಗಿ ರಾಜ್ಯಸಭಾ ಸದಸ್ಯ ಹಾಗೂ ನಟ ಜಗ್ಗೇಶ್ ಸೇರಿದಂತೆ ಜಿಲ್ಲೆಯ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸುವರು ಎಂದರು.
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1177 ಸರ್ಕಾರಿ ಶಾಲಾ- ಕಾಲೇಜುಗಳಿವೆ, ಅದರಲ್ಲಿ ಪ್ರಾಥಮಿಕ 984, ಪ್ರೌಢ 139, ಪದವಿ ಪೂರ್ವ ಮತ್ತು ಪದವಿ 54 ಗಳಿವೆ. ಇವುಗಳಿಗೆ ಸಾರ್ವಜನಿಕರ ಸಹಭಾಗಿತ್ವದಲ್ಲಿ 60 ಕೋಟಿ ವೆಚ್ಚದಲ್ಲಿ ಶಾಲಾ-ಕಾಲೇಜುಗಳಿಗೆ ಬಣ್ಣ ಬಳಿಯುವ ಅಭಿಯಾನ ನಡೆಸಲಾಗುವುದು. ಇದಕ್ಕಾಗಿ ಶಾಲೆಯ ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು, ಸಂಘ ಸಂಸ್ಥೆಗಳ ಶ್ರಮದಾನಕ್ಕೆ ಮುಂದಾಗಬೇಕು ಎಂದರು.