ಪ್ರೀತಿಸಿ ಮದುವೆಯಾಗಿದ್ದಕ್ಕೆ ಮಗಳು-ಅಳಿಯನನ್ನೇ ಕೊಂದ ಕ್ರೂರಿ ತಂದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ತಮಿಳುನಾಡಿನ ಟುಟಿಕೋರಿನ್ ಜಿಲ್ಲೆಯಲ್ಲಿ ತಂದೆಯೊಬ್ಬ ತನ್ನ ಮಗಳು ಮತ್ತು ಅಳಿಯನನ್ನು ಕಡಿದು ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ಈ ವ್ಯಕ್ತಿಯನ್ನು ಮುತ್ತುಕುಟ್ಟಿ (50) ಎಂದು ಗುರುತಿಸಲಾಗಿದ್ದು, ಟುಟಿಕೋರಿನ್ ಜಿಲ್ಲೆಯ ಕೋವಿಲ್‌ಪಟ್ಟಿ ನಗರದ ಸಮೀಪದ ವೀರಪಟ್ಟಿ ಗ್ರಾಮದವನು ಎನ್ನಲಾಗಿದೆ.

ಅವರ ಪುತ್ರಿ ರೇಷ್ಮಾ (20) ಕೋವಿಲ್‌ಪಟ್ಟಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಅದೇ ಪ್ರದೇಶದ ದಿನಗೂಲಿ ಕಾರ್ಮಿಕ ಮಾಣಿಕರಾಜ್ (26) ಎಂಬಾತನನ್ನು ಹುಡುಗಿ ಪ್ರೀತಿಸುತ್ತಿದ್ದಳು. ಆಕೆಯ ತಂದೆ ಮುತ್ತುಕುಟ್ಟಿ ತಮ್ಮ ಸಂಬಂಧವನ್ನು ಒಪ್ಪದಿದ್ದರೂ ಅವರು ಇತ್ತೀಚೆಗೆ ಮದುವೆಯಾಗಿದ್ದರು.

ಇವರ ಪ್ರೀತಿಗೆ ರೇಷ್ಮಾ ತಂದೆ ಮುತ್ತುಕುಟ್ಟಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕೆಲ ದಿನಗಳ ಹಿಂದೆ ಮದುವೆಯಾಗಿದ್ದ ದಂಪತಿ ಎರಡು ದಿನಗಳ ಹಿಂದಷ್ಟೇ ಗ್ರಾಮಕ್ಕೆ ಮರಳಿದ್ದರು. ಇದನ್ನು ಮುತ್ತುಕುಟ್ಟಿ ವಿರೋಧಿಸಿ ಅವರಿಗೆ ತೊಂದರೆಯುಂಟುಮಾಡಿದ್ದ. ನಂತರ ಗ್ರಾಮ ಪಂಚಾಯತಿ ಮೂಲಕ ಇಬ್ಬರಿಗೂ ಗ್ರಾಮದಲ್ಲಿಯೇ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಮುತ್ತುಕುಟ್ಟಿಗೆ ಮಗಳ ಮೇಲೆ ಸಿಟ್ಟು ಬಂದಿತ್ತು.

ನಿನ್ನೆ ಸಂಜೆ ಮನೆಯಲ್ಲಿ ರೇಷ್ಮಾ ಮತ್ತು ಆಕೆಯ ಪತಿ ಮಾಣಿಕರಾಜ್ ಇಬ್ಬರೇ ಇದ್ದಾಗ ಮುತ್ತುಕುಟ್ಟಿ ಅಲ್ಲಿಗೆ ಹೋಗಿ ಇಬ್ಬರನ್ನೂ ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿ ಅಪರಾಧ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಯ ಮಾಹಿತಿಯ ಮೇರೆಗೆ ಎಟ್ಟಾಯಪುರಂ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ತೂತುಕುಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಕುರಿತು ತನಿಖೆ ಜಾರಿಯಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!