ಹೊಸದಿಗಂತ ಹಾಸನ :
ತೀವ್ರವಾಗಿ ಗಾಯಗೊಂಡ ದೈತ್ಯ ಕಾಡಾನೆಯೊಂದು ರಸ್ತೆ ಬದಿಯಲ್ಲಿ ಬಿದ್ದು ರಕ್ತದ ಮಡುವಿನಲ್ಲಿ ಮೃತಪಟ್ಟಿರುವ ಘಟನೆ ಸಕಲೇಶಪುರ ತಾಲೂಕಿನ ಸುಳ್ಳಕ್ಕಿ ಗ್ರಾಮದಲ್ಲಿ ನಡೆದಿದೆ.
ಆನೆ ಸಾವಿಗೆ ವಿದ್ಯುತ್ ಆಘಾತ, ಗುಂಡೇಟು ಇಲ್ಲವೇ ವಾಹನ ಅಪಘಾತ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಗೈ ವೈರ್ ಆನೆಯ ಕಳೆಬರದ ಕೆಳಗೆ ಸಿಲುಕಿದ್ದು, ಸಾಯುವ ಮುನ್ನ ಆನೆಗೆ ರಕ್ತಸ್ರಾವವಾಗಿದ್ದು ತಲೆಭಾಗದ ರಕ್ತದ ಮಡುವಿನಲ್ಲಿದೆ. ಬೆಳಗ್ಗೆ ದಾರಿ ಹೋಕರು ಅದನ್ನು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸೆಸ್ಕ್ ಸಿಬ್ಬಂದಿ ಹೈಟೆನ್ನನ್ ವಿದ್ಯುತ್ ಮಾರ್ಗ ಹಾದು ಹೋಗಿರುವ ಕಂಬದ ಗೈ ವೈರನ್ನು ಸಮೀಪದ ಮರಕ್ಕೆ ಕಟ್ಟಿದ್ದರು ಎನ್ನಲಾಗಿದ್ದು, ಅದನ್ನು ತಾಕಿದ ಆನೆಗೆ ವಿದ್ಯುತ್ ಸ್ಪರ್ಶವಾಗಿರಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಯಿಂದ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಸಾರ್ವಜನಿಕರು ಆನೆ ಸಾವಿಗೀಡಾಗಿರುವುದನ್ನು ಕಂಡು ಮರುಗಿದರು.