ದಿಗಂತ ವರದಿ ಹೊನ್ನಾವರ:
ತಾಲೂಕಿನಲ್ಲಿ ಮುಂಗಾರು ಆರ್ಭಟ ಜೊತೆ ಗುಡ್ಡ ಕುಸಿತವು ಮುಂದುವರೆದಿದ್ದು, ಭಾಸ್ಕೇರಿ ಸಮೀಪ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಭಾರಿ ಗುಡ್ಡ ಕುಸಿತ ಉಂಟಾಗಿ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾದ ಘಟನೆ ನಡೆದಿದೆ.
ಹೊನ್ನಾವರ-ಬೆಂಗಳೂರು ಸಂಪರ್ಕದ ಹೆದ್ದಾರಿಯಾಗಿದ್ದು, ಗುಡ್ಡದ ಜೊತೆಗೆ ಭಾರಿ ಪ್ರಮಾಣದ ಬಂಡೆಗಲ್ಲು ಬಿದ್ದು ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಮಧ್ಯರಾತ್ರಿ ಘಟನೆ ಸಂಭವಿಸಿದ ಕಾರಣ ನೂರಾರು ವಾಹನಗಳು ರಸ್ತೆಯಲ್ಲೇ ಸಿಲುಕಿಕೊಂಡಿದ್ದವು. ಹಲವು ಗಂಟೆಗೂ ಅಧಿಕ ಕಾಲ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಪರಿಣಾಮ ವಾಹನ ಸವಾರರು ಪರದಾಡುವಂತಾಯಿತು.
ಕ್ಷಣಕ್ಷಣಕ್ಕೂ ಕುಸಿಯುತ್ತಿರುವ ಗುಡ್ಡದಿಂದಾಗಿ ವಾಹನ ಸವಾರರ ಆತಂಕ ಹೆಚ್ಚಾಗಿತ್ತು. ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬ್ಯಾರಿಕೇಡ್ ಅಳವಡಿಸಿ ಮಣ್ಣು ಕೊಂಚ ತೆರವು ಬಳಿಕ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಟ್ಟು . ಬಂಡೆಗಲ್ಲು ಮಣ್ಣು ತೆರವುಗೊಳಿಸಿದ ಬಳಿಕ ಇದೀಗ ರಸ್ತೆ ಸಂಚಾರ ಸುಗಮಗೊಳಿಸಿದ್ದಾರೆ.