ಹೊಸದಿಗಂತ ವರದಿ ಕಲಬುರಗಿ:
ರಾಜ್ಯ ಬಿಜೆಪಿ ಪಕ್ಷದಲ್ಲಿ ಮನೆ ಒಂದು ಮೂರು ಬಾಗಿಲುಗಳಾಗಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿ,ಇವರ ಎರಡು ಪಕ್ಷಗಳ ಮನೆಗೆ ಬೆಂಕಿ ಹತ್ತಿದೆ.ಅದನ್ನು ನಾವು ಬೆಳಗಾವಿಯಲ್ಲಿ ನೋಡಿದ್ದೇವೆ ಎಂದರು.
ಒಂದು ಬಾಗಿಲನ್ನು ಬಸನಗೌಡ ಪಾಟೀಲ್ ಯತ್ನಾಳ್ ಕಾಯುತ್ತಿದ್ದಾರೆ.ಇನ್ನೊಂದು ಬಾಗಿಲನ್ನು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಾಯಿತಾ ಇದಾರೆ.ಮೂರನೇ ಬಾಗಿಲನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಾಯ್ತಾ ಇದಾರೆ ಎಂದು ಟಾಂಗ್ ನೀಡಿದರು.
ಬಿಜೆಪಿ ಮತ್ತು ಜೆಡಿಎಸ್ ಪಕ್ಷದಲ್ಲಿ ಸಮನ್ವಯ ಕೊರತೆ ಎದ್ದು ಕಾಣುತ್ತಿದೆ.ಬೆಳಗಾವಿ ಅಧಿವೇಶನದಲ್ಲಿ ಬರಗಾಲದ ಕುರಿತು ಚರ್ಚೆ ಮಾಡು ಎಂದರೆ, ತೆಲಂಗಾಣ ಚುನಾವಣೆ ಬಗ್ಗೆ ಚರ್ಚೆ ಮಾಡುತ್ತಾರೆ. ಇನ್ನೋಂದೆಡೆ ನಾನು ವಿರೋಧ ಪಕ್ಷದ ನಾಯಕ ಎಂದು ಒಬ್ಬರಂತಾರೆ.ಅಸಲಿ ವಿರೋಧ ಪಕ್ಷದ ನಾಯಕ ನಾನು ಅಂತ ಇನ್ನೊಬ್ಬರಂತಾರೆ ಎಂದು ತಿವಿದರು.
ಈ ಎಲ್ಲ ಬೆಳವಣಿಗೆಗಳು ನೋಡಿದರೆ, ಬಿಜೆಪಿ ಪಕ್ಷದಲ್ಲಿನ ಮನೆಗೆ ನೂರು ಬಾಗಿಲುಗಳಾಗಿವೆ ಎಂದು ವಾಗ್ದಾಳಿ ನಡೆಸಿದರು.