ಹೊಸದಿಗಂತ ವರದಿ ಮಡಿಕೇರಿ:
ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಆ.9 ರಂದು ವೀರಾಜಪೇಟೆ ಪಟ್ಟಣದಲ್ಲಿ ಬೃಹತ್ ಪಂಜಿನ ಮೆರವಣಿಗೆಯನ್ನು ಅಯೋಜಿಸಲಾಗಿದೆ ಎಂದು ಹಿಂದೂ ಜಾಗರಣ ವೇದಿಕೆಯ ಪ್ರಮುಖರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ತಾಲೂಕು ಸಂಯೋಜಕ್ ಅನಿಲ್ ಸಿದ್ದಾಪುರ, ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಬೃಹತ್ ಪಂಜಿನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದ್ದು, ಅಂದು ಸಂಜೆ 6 ಗಂಟೆಗೆ ತೆಲುಗರ ಬೀದಿಯ ಶ್ರೀ ಮಾರಿಯಮ್ಮ ದೇವಾಲಯದ ಬಳಿಯಿಂದ ಮೆರವಣಗೆ ಆರಂಭವಾಗಲಿದೆ ಎಂದರು.
ಖಾಸಗಿ ಬಸ್ಸು ನಿಲ್ದಾಣ, ಗೊಣಿಕೊಪ್ಪಲು ರಸ್ತೆ, ದೊಡ್ಡಟ್ಟಿ ಚೌಕಿ ಮೂಲಕ ಸಾಗಿ ಕಾರು ನಿಲ್ದಾಣದಲ್ಲಿ ಮೆರವಣಿಗೆ ಅಂತ್ಯಗೊಳ್ಳಲಿದೆ ಎಂದು ತಿಳಿಸಿದರು.
ನಗರ ಸಹ ಸಂಯೋಜಕ್ ದಿನೇಶ್ ನಾಯರ್ ಮಾತನಾಡಿ, ಅಖಂಡ ಭಾರತವು ರಾಜಕೀಯದ ಲಾಭಕ್ಕಾಗಿ ಛಿದ್ರಗೊಂಡಿತ್ತು. ಈ ಕರಾಳ ದಿನದ ಸತ್ಯವನ್ನು ಜನತೆಗೆ ತಿಳಿಸುವ ಸಲುವಾಗಿ ಅಖಂಡ ಭಾರತ ಸಂಕಲ್ಪ ದಿನವನ್ನು ಆಚರಿಸಲಾಗುತ್ತದೆ ಎಂದರು.
ಕಾರು ನಿಲ್ದಾಣದಲ್ಲಿ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಸೇನಾಧಿಕಾರಿ ಹಾಗೂ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಸೋಮಣ್ಣ ವಹಿಸಲಿದ್ದು, ಹಿಂದೂ ಯುವ ವಾಹಿನಿಯ ಪ್ರಾಂತೀಯ ಪ್ರಮುಖ್ ಕೆ.ಟಿ.ಉಲ್ಲಾಸ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಸಹ ಸಂಯೋಜಕ್, ನಗರ ನಿಧಿ ಪ್ರಮುಖ ಕಿಶೋರ್ ಶೆಟ್ಟಿ, ಬಿ.ಜಿ.ನಾಗೇಶ್, ವಲಯ ಸಂಯೋಜಕ್ ಅನಿಲ್ ಅಪ್ಪು, ಸಂಯೋಜಕರುಗಳಾದ ವಿ.ಡಿ.ಬೋಪಣ್ಣ ಹಾಗೂ ಎಂ.ವಿ.ಸಚಿನ್ ಉಪಸ್ಥಿತರಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ