ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಂಗೇರಿಯ ವಿಶ್ವ ಒಕ್ಕಲಿಗ ಮಠ ಮಹಾಸಂಸ್ಥಾನದ ನೂತನ ಉತ್ತರಾಧಿಕಾರಿಯಾಗಿ ಕೆಎಎಸ್ ಅಧಿಕಾರಿ ಡಾ.ಹೆಚ್ ಎಲ್ ನಾಗರಾಜು ಸನ್ಯಾಸತ್ವ ಸ್ವೀಕರಿಸಿದ್ದಾರೆ.
ಶ್ರೀ ಕುಮಾರ ಚಂದ್ರಶೇಖರ್ ಸ್ವಾಮೀಜಿ ನಂತರ ಸಂಸ್ಥಾನ ಮಠಕ್ಕೆ ಪೀಠಾಧಿಪತಿಯಾಗಿ ನಾಗರಾಜು ಆಯ್ಕೆಯಾಗಿದ್ದು, ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮದಲ್ಲಿ ಸನ್ಯಾಸತ್ವ ಸ್ವೀಕರಿಸಿದ್ದಾರೆ.
ಈ ಕುರಿತು ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಶ್ರೀಗಳು ಮಾತನಾಡಿ, ಎರಡು ಮಠಗಳ ನಡುವೆ ಏನೋ ಒಂದು ಸಮಸ್ಯೆ ಇದೆ ಎಂದು ನಿಡುಮಾವಡಿ ಶ್ರೀಗಳು ಹೇಳಿದಾಗ ಎಲ್ಲರಿಗೂ ಅನ್ನಿಸುತ್ತೆ. ಆದರೆ ಮಠಗಳ ನಡುವೆ ಯಾವುದೇ ಸಮಸ್ಯೆ ಇಲ್ಲ. ಒಂದೇ ಗುರು, ಒಂದೇ ಸಮುದಾಯ, ಒಂದೇ ತಾಯಿ ಎಂದು ಪೂಜ್ಯರು ಹೇಳಿದ್ದಾರೆ. ಮುಂದೆಯೂ ಕೂಡ ಯಾವುದೇ ರೀತಿ ಸಮಸ್ಯೆಗಳು ಬರದಂತೆ ನಡೆಸಿಕೊಂಡು ಹೋಗಬೇಕು. ನಾಗರಾಜ್ರವರು ನಿಶ್ಚಲಾನಂದನಾಥರಾಗಿ ಬದಲಾಗುವ ಸಂದರ್ಭದಲ್ಲಿ ಇಷ್ಟು ಜನ ಸೇರಿರುವುದು ಖುಷಿಯ ವಿಚಾರ. ನಾವೆಲ್ಲಾ ಒಂದೇ ಗುರು ಪರಂಪರೆಯವರು. ಕಾಲದ ಸಂದರ್ಭ ಇಂದು ನಿಶ್ಚಲಾನಂದನಾಥ ಸ್ವಾಮಿಗಳು ಕಂಕಣ ತೊಟ್ಟು ಸಮಾಜದ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ ಎಂದರು.
ಚಂದ್ರಶೇಖರನಾಥ ಸ್ವಾಮೀಜಿಯವರದ್ದು ನಾಲ್ಕು ದಶಕಗಳ ಪರಿಶ್ರಮ. ಒಕ್ಕಲಿಗರ ಮಹಾ ಸಂಸ್ಥಾನ ನಿನ್ನೆ ಮೊನ್ನೆ ಹುಟ್ಟಿದ್ದಲ್ಲ. 40 ವರ್ಷಗಳ ಹಿಂದೆ ಹುಟ್ಟಿದ್ದು. ಚಂದ್ರಶೇಖರ ಶ್ರೀಗಳು ಸಮಾಜದಲ್ಲಿ ಸಾಕಷ್ಟು ಬದಲಾವಣೆ ತಂದು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಇನ್ನಷ್ಟು ಎತ್ತರಕ್ಕೆ ಈ ಸಮಾಜವನ್ನು ಕೊಂಡೊಯ್ಯಲು ನಾಗರಾಜ್ ಅವರು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಹಾಲು ಜೇನಿನ ರೀತಿಯಲ್ಲಿ ಬೆರೆತು ಸಂಸ್ಥಾನಗಳನ್ನು ನಡೆಸಿಕೊಂಡು ಹೋಗೋಣ ಎಂದು ತಿಳಿಸಿದರು.