ಹೊಸದಿಗಂತ ವರದಿ, ನಾಗಮಂಗಲ :
ಜೆಡಿಎಸ್ನೊಂದಿಗೆ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳು ತ್ತಿರುವ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಬಹಳಷ್ಟು ಮಂದಿ ಅಸಮಾಧಾನ ವ್ಯಕ್ತಪಡಿಸುತ್ತಿರುವ ಹಿನ್ನಲೆಯಲ್ಲಿ ಎರಡೂ ಪಕ್ಷಗಳಿಂದ ಸಾಕಷ್ಟು ಮಂದಿ ಕಾಂಗ್ರೆಸ್ ಪಕ್ಷ ಸೇರಲಿ ದ್ದಾರೆಂದು ಕೃಷಿ ಹಾಗೂ ಜಿಲ್ಲಾ ಉಸ್ತು ವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಪಟ್ಟಣದಲ್ಲಿ ಮಂಗಳವಾರ ನಡೆದ ಸಹಕಾರ ಸಪ್ತಾಹದ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳನ್ನು ಅವರು ಬಹಳ ಸೂಕ್ಷ್ಮವಾಗಿ ಗಮನಹರಿಸುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷದಲ್ಲಿ ಭುಗಿ ಲೆದ್ದಿರುವ ಅಸಮಾಧಾನದಿಂದ ಸಾಕಷ್ಟು ಮಂದಿ ಹೊರಬರುತ್ತಿರುವ ಮಾಹಿತಿ ನನಗೂ ತಲುಪಿದೆ. ಎಷ್ಟು ಮಂದಿ ಯಾವಾಗ ಮೂಹೂರ್ತ ನಿಧಿಪಡಿಸಿ ಪಕ್ಷಕ್ಕೆ ಬರುತ್ತಾರೆಂಬುದು ನನಗೆ ಗೊತ್ತಿಲ್ಲ ಎಂದರು.
ಬಿಜೆಪಿ ಪಕ್ಷದ ನೂತನ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಆ ಪಕ್ಷದ ಬಹಳಷ್ಟು ಮಂದಿಗೆ ಅಸಮಾಧಾನವಿದೆ. ಅಲ್ಲದೆ ಬಿಜೆಪಿಯವರು ಜೆಡಿಎಸ್ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿರುವ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅವರ ತೀರ್ಮಾನ ನಮಗೆ ಸಮಾಧಾನವಿಲ್ಲ ವೆಂದು ಜೆಡಿಎಸ್ ಪಕ್ಷದವರಲ್ಲಿಯೂ ಅಸಮಾಧಾನದ ಹೊಗೆಯಾಡುತ್ತಿದೆ. ಹಾಗಾಗಿ ಎಷ್ಟು ಮಂದಿ ಯಾವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾ ರೆಂಬುದನ್ನು ನಾನು ಈಗ ಹೇಳುವುದಿಲ್ಲ ಸಂದರ್ಭ ಬಂದಾಗ ಹೇಳುತ್ತೇನೆ. ಆದರೆ ನಮಗೆ ಅವರನ್ನು ತಕ್ಷಣಕ್ಕೆ ಕರೆದು ಕೊಂಡು ಸರ್ಕಾರ ಉಳಿಸಿಕೊಳ್ಳ ಬೇಕೆಂಬ ಅನಿವಾರ್ಯತೆಯಿಲ್ಲ. ನಮ್ಮಲ್ಲಿಯೇ 136 ಸ್ಥಾನಗಳ ಜೊತೆಗೆ ಪಕ್ಷೇತರ ಶಾಸಕರೂ ಸಹ ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಹಾಗಾಗಿ ಪಕ್ಷದ ತತ್ವ ಸಿದ್ದಾಂತ ಒಪ್ಪಿ ರಾಜ್ಯದ ಜನರ ಪರವಾಗಿ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮ ಗಳಿಗೆ ನಾವೂ ಕೈಜೋಡಿಸುತ್ತೇವೆಂದು ಯಾರೇ ಬಂದರೂ ಸಹ ಸಂತೋಷ ದಿಂದ ಸ್ವಾಗತಿಸುವುದಾಗಿ ತಿಳಿಸಿದರು.