ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೃಷಿ ಹೊಂಡಕ್ಕೆ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ನರಸಿಂಹನಹಳ್ಳಿ ಗ್ರಾಮದ ಜಮೀನಿನಲ್ಲಿ ನಡೆದಿದೆ. ಉಜ್ಜನಿ ಹೊಸಹಳ್ಳಿ ಗ್ರಾಮದ ಸುನೀಲ್ (30) ಮೃತ ವ್ಯಕ್ತಿ.
ಎರಡು ತಿಂಗಳ ಹಿಂದೆಯಷ್ಟೇ ಸುನೀಲ್ ಕೃಷಿ ಆರಂಭಿಸಿದ್ದರು. ತೋಟದಲ್ಲೇ ವಾಸವಿದ್ದ ಸುನೀಲ್ ಬಿಹಾರ ಮೂಲದ ಕಾರ್ಮಿಕರ ಜತೆ ಹೋಳಿ ಆಚರಿಸುತ್ತಿದ್ದರು. ಹೋಳಿ ಹಬ್ಬದ ನಂತರ ಕೆರೆಯಲ್ಲಿ ಕೈಕಾಲು ತೊಳೆಯಲು ಹೋಗುತ್ತಿದ್ದಾಗ ಕಾಲು ಜಾರಿ ಬಿದ್ದಿದ್ದಾರೆ ಎಂದು ಹೇಳಲಾಗಿದೆ. ಬಿದ್ದ ರಭಸಕ್ಕೆ ಮುಖಕ್ಕೆ ಗಂಭೀರ ಗಾಯಗಳಾಗಿವೆ.
ಕಾರ್ಮಿಕರು ಹೊಲದಲ್ಲಿನ ಗುಂಡಿ ಬಳಿ ಬಂದಾಗ ಸುನೀಲ್ ಶವ ಪತ್ತೆಯಾಗಿದೆ. ಶವವನ್ನು ಕಂಡು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ದೊಡ್ಡಬಳಾಪುರ ಗ್ರಾಮಾಂತರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.