ಹೊಸ ದಿಗಂತ ವರದಿ,ಅಂಕೋಲಾ:
ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಳಲಗಾವ್ ಬಳಿ ಪುರುಷನೋರ್ವನ ಮೃತ ದೇಹ ಪತ್ತೆಯಾಗಿದ್ದು ಇದು ಆರು ದಿನಗಳ ಹಿಂದೆ ಶಿರಶಿ ತಾಲೂಕಿನ ಮತ್ತಿಘಟ್ಟದ ಜೋಗನ ಹಕ್ಕಲ್ ಜಲಪಾತ ವೀಕ್ಷಣೆಗೆ ತೆರಳಿದ್ದ ಸಂದರ್ಭದಲ್ಲಿ ಕಾಲು ಜಾರಿ ಜಲಪಾತಕ್ಕೆ ಬಿದ್ದು ಕಣ್ಮರೆಯಾಗಿದ್ದ ಯುವಕನ ಮೃತದೇಹ ಆಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಆರು ದಿನಗಳ ಹಿಂದೆ ಸ್ನೇಹಿತರ ಜೊತೆ ಜಲಪಾತ ವೀಕ್ಷಣೆಗೆ ತೆರಳಿದ್ದ ಶಿರಶಿಯ ಸೋಮನಹಳ್ಳಿ ಉಂಬಳೆಕೊಪ್ಪದ ಪವನ್ (24) ಕಾಲುಜಾರಿ ಜಲಪಾತಕ್ಕೆ ಬಿದ್ದು ಕಣ್ಮರೆಯಾಗಿದ್ದ.
ಆತನ ಮೃತ ದೇಹ ಶೋಧನೆಗಾಗಿ ಪೊಲೀಸ್ ಸಿಬ್ಬಂದಿಗಳು, ಅಗ್ನಿಶಾಮಕದಳ ಹಾಗೂ ಎನ್. ಡಿ.ಆರ್ ಎಫ್ ಸಿಬ್ಬಂದಿಗಳು ಆರು ದಿನಗಳಿಂದ ಸತತವಾಗಿ ಶೋಧ ಕಾರ್ಯ ನಡೆಸಿದ್ದರು.
ಇದೀಗ ಮಳಲಗಾವ್ ಬಳಿ ಅರಣ್ಯ ಪ್ರದೇಶದ ಹಳ್ಳದ ನೀರಿನಲ್ಲಿ ಮೃತ ದೇಹ ಪತ್ತೆಯಾಗಿದ್ದು ಊದಿಕೊಂಡು ಗುರುತಿಸಲು ಸಾದ್ಯವಾಗದ ಸ್ಥಿತಿಯಲ್ಲಿ ಇದೆ ಎನ್ನಲಾಗುತ್ತಿದೆ.
ಕಣ್ಮರೆಯಾಗಿದ್ದ ಪವನ್ ಕುಟುಂಬದ ಜನರು ಇದು ಪವನ್ ಮೃತ ದೇಹ ಎಂದು ಹೇಳುತ್ತಿದ್ದಾರಾರೂ ಡಿ ಎನ್ ಎ ಪರೀಕ್ಷೆ ನಡೆಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲು ಅಂಕೋಲಾ ಪೊಲೀಸರು ನಿರ್ಧರಿಸಿದ್ದಾರೆ.
ಪಿ.ಎಸ್.ಐ ಉದ್ದಪ್ಪ ಧರೆಪ್ಪನವರ್ ಮತ್ತು ಸಿಬ್ಬಂದಿಗಳು ಮೃತ ದೇಹ ಪತ್ತೆಯಾಗಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ್ ನಾಯ್ಕ ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದರು.
ಘಟನೆ ಕುರಿತಂತೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.