ಹೊಸದಿಗಂತ ಡಿಜಿಟಲ್ ಡೆಸ್ಕ್:
ರಸ್ತೆಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಕವರ್ ಕಚ್ಚುತ್ತಿದ್ದಂತೆಯೇ ಭೀಕರ ಸ್ಫೋಟ ಸಂಭವಿಸಿದ್ದು, ಸಾಕು ನಾಯಿಯೊಂದು ಮೃತಪಟ್ಟಿರುವ ಘಟನೆ ದಾವಣಗೆರೆಯ ಚನ್ನಗಿರಿಯ ನಲ್ಕುದರೆ ಗ್ರಾಮದಲ್ಲಿ ನಡೆದಿದೆ.
ಅರೆಕೇರೆ ರುದ್ರೇಶ್ ಅವರ ಮನೆಯ ಸಾಕು ನಾಯಿ ಮಾಲೀಕನ ಜೊತೆ ಜಮೀನಿಗೆ ಬಂದಿತ್ತು. ರುದ್ರೇಶ್ ದನಗಳನ್ನು ಮೇಯಿಸಲು ಬಿಟ್ಟು ನಿಂತಿದ್ದರು. ಈ ವೇಳೆ ಜೊತೆಗಿದ್ದ ಸಾಕುನಾಯಿ ರಸ್ತೆಯಲ್ಲಿ ಬಿದ್ದಿದ್ದ ಕವರ್ ಒಂದನ್ನು ಊಟ ಎಂದು ತಿಳಿದುಕೊಂಡು ಕಚ್ಚಿದೆ. ಕಚ್ಚಿದ ತಕ್ಷಣ ದೊಡ್ಡ ಸ್ಪೋಟ ಸಂಭವಿಸಿದ್ದು, ನಾಯಿಯ ಮುಖ ಛಿದ್ರ ಛಿದ್ರವಾಗಿದೆ. ಒಂದು ಕಿಲೋಮೀಟರ್ವರೆಗೂ ಸ್ಫೋಟದ ಸದ್ದು ಕೇಳಿಸಿದ್ದು, ಗ್ರಾಮಸ್ಥರು ಆತಂಕದಿಂದ ಹೆದರಿದ್ದಾರೆ.
ಕಾಡು ಹಂದಿಗಳ ನಿಯಂತ್ರಣಕ್ಕೆ ಇಡುವ ಸಿಡಿಮದ್ದಿನ ರೀತಿ ಇದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸಿ, ಬ್ಲಾಸ್ಟ್ ಆಗಿರುವ ವಸ್ತುವನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ವರದಿ ಬಳಿಕ ಬ್ಲಾಸ್ಟ್ ಆಗಿರುವ ವಸ್ತು ಏನು ಎಂಬುದು ತಿಳಿದುಬರಲಿದೆ. ಸದ್ಯ ಗ್ರಾಮಸ್ಥರು ಸ್ಫೋಟಕ ವಸ್ತುವನ್ನು ಇಟ್ಟಿರುವ ಕಿಡಿಗೇಡಿಗಳ ಪತ್ತೆಗೆ ಆಗ್ರಹಿಸಿದ್ದಾರೆ. ಸಂತೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ನಿತ್ಯವೂ ಬೆನ್ನಹಿಂದೆಯೇ ಓಡಾಡುತ್ತಿದ್ದ ಮುದ್ದಿನ ನಾಯಿಯನ್ನು ಕಳೆದುಕೊಂಡ ಕುಟುಂಬ ನೋವಿನಲ್ಲಿದೆ.



