ಸರಕಾರ, ರೈತರ ನಡುವಿನ ಸಮಸ್ಯೆ ಬಗೆಹರಿಸಲು ‘ತಟಸ್ಥ ಅಂಪೈರ್’‌ ಬೇಕು: ಸುಪ್ರೀಂಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP Law) ನೀಡುವ ಕುರಿತು ಕಾನೂನು ಜಾರಿಗೊಳಿಸಬೇಕು ಎಂದು ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲು ಮತ್ತೊಮ್ಮೆ ದೆಹಲಿಗೆ (Delhi) ಪಾದಯಾತ್ರೆ ನಡೆಸಲು ಯೋಜಿಸುತ್ತಿರುವ ರೈತರನ್ನು ತಲುಪಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಹೇಳಿದೆ.

ಕೇಂದ್ರ ಸರ್ಕಾರವು, ಐದು ವರ್ಷಗಳಿಗೆ ಎಂಎಸ್‌ಪಿ ಖಾತರಿ ನೀಡಲಾಗುವುದು ಎಂದಿದೆ. ಆದರೆ, ಇದಕ್ಕೆ ಒಪ್ಪದ ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ. ಇನ್ನು, ಆಗಸ್ಟ್‌ 15ರಂದು ದೇಶಾದ್ಯಂತ ಟ್ರ್ಯಾಕ್ಟರ್‌ ರ‍್ಯಾಲಿ ಕೈಗೊಳ್ಳಲು ತೀರ್ಮಾನಿಸಿದ್ದಾರೆ. ಇದರ ಮಧ್ಯೇಯೇ, ಸರ್ಕಾರ ಹಾಗೂ ರೈತರ ನಡುವೆ ಇರುವ ನಂಬಿಕೆಯ ಸಮಸ್ಯೆಯನ್ನು ಬಗೆಹರಿಸಲು ತಟಸ್ಥ ಅಂಪೈರ್‌ಗಳು (ನಿರ್ಣಾಯಕರು) ಬೇಕಾಗಿದ್ದಾರೆ ಎಂದು ಕೋರ್ಟ್ ಸಲಹೆ ನೀಡಿದೆ.

ಶಂಭು ಗಡಿಯಲ್ಲಿ ರೈತರ ಪ್ರತಿಭಟನೆಯಿಂದಾಗಿ ಗಡಿ ಬಂದ್‌ ಆಗಿದ್ದು, ಇದನ್ನು ಓಪನ್‌ ಮಾಡಬೇಕು ಎಂಬುದಾಗಿ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ನೀಡಿದ ನಿರ್ದೇಶನ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ , ರೈತರ ಜತೆ ಸಂಧಾನ ಮಾಡಿಕೊಳ್ಳಲು ಸರ್ಕಾರ ಪ್ರಯತ್ನಿಸಿದೆಯೇ? ಯಾವುದಾದರೂ ಕ್ರಮ ತೆಗೆದುಕೊಂಡಿದೆಯೇ? ಸಚಿವರು ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿದ್ದಾರೆಯೇ? ಸರ್ಕಾರ ಹಾಗೂ ರೈತರ ಮಧ್ಯೆ ನಂಬಿಕೆಯ ಸಮಸ್ಯೆ ಇದೆ. ಇದಕ್ಕಾಗಿ ಕೆಲ ತಟಸ್ಥ ನಿರ್ಣಾಯಕರು ಬೇಕಾಗಿದ್ದಾರೆ ಎಂದು ಕೋರ್ಟ್‌ ತಿಳಿಸಿತು.

ಹಾಗೆಯೇ, ಗಡಿಯಲ್ಲಿ ಯಥಾಸ್ಥಿತಿ ಮುಂದುವರಿಸಬೇಕು ಎಂಬುದಾಗಿ ಪಂಜಾಬ್‌ ಹಾಗೂ ಹರಿಯಾಣ ರಾಜ್ಯ ಸರ್ಕಾರಗಳಿಗೆ ಸೂಚಿಸಿತು. ತಟಸ್ಥ ತೀರ್ಪುಗಾರರು ಇದ್ದರೆ ಹೆಸರು ಸೂಚಿಸಿ ಎಂಬುದಾಗಿಯೂ ಸರ್ಕಾರಗಳಿಗೆ ತಿಳಿಸಿತು.

ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಆಗಸ್ಟ್‌ 15ರಂದು ದೇಶಾದ್ಯಂತ ಟ್ರ್ಯಾಕ್ಟರ್‌ ರ‍್ಯಾಲಿ ಕೈಗೊಳ್ಳಲಾಗುವುದು ಎಂದು ರಾಹುಲ್‌ ಗಾಂಧಿ ಜತೆ ಮಾತುಕತೆ ನಡೆಸಿದ ಬಳಿಕ ರೈತ ಸಂಘಟನೆಗಳ ನಾಯಕರು ತಿಳಿಸಿದ್ದಾರೆ. ರೈತರು ಕೈಗೊಂಡ ದೆಹಲಿ ಚಲೋ ಹೋರಾಟವು ಆಗಸ್ಟ್‌ 31ಕ್ಕೆ 200 ದಿನ ಪೂರೈಸುತ್ತದೆ. ಹಾಗಾಗಿ, ಸರ್ಕಾರದ ಮೇಲೆ ಇನ್ನಷ್ಟು ಒತ್ತಡ ಹೇರಲು ತೀರ್ಮಾನಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!