ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರಕವಿ ಕುವೆಂಪು ಅವರ ಸುಪ್ರಸಿದ್ಧ ಕಾವ್ಯ ‘ಜೈ ಭಾರತ ಜನನಿಯ ತನುಜಾತೆ’ ನಾಡಗೀತೆಯಲ್ಲಿ ಶೀಘ್ರದಲ್ಲೇ ಐತಿಹಾಸಿಕ ಬದಲಾವಣೆಯೊಂದು ಕಂಡುಬರುವ ಸಾಧ್ಯತೆಯಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಗೀತೆಯಲ್ಲಿ ಜೈನ ಧರ್ಮದ ಜೊತೆಗೆ ‘ಬೌದ್ಧ ಧರ್ಮ’ವನ್ನೂ ಒಳಗೊಳ್ಳಲು ರಾಜ್ಯ ಸರ್ಕಾರ ಗಂಭೀರ ಆಲೋಚನೆ ನಡೆಸಿದೆ.
ಬಿಳಿಮಲೆ ಸಮಿತಿಯ ಮಹತ್ವದ ಪ್ರಸ್ತಾಪ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಪುರುಷೋತ್ತಮ ಬಿಳಿಮಲೆ ನೇತೃತ್ವದ ತಜ್ಞರ ಸಮಿತಿಯು ಈ ಕುರಿತು ರಾಜ್ಯ ಸರ್ಕಾರಕ್ಕೆ ಅಧಿಕೃತ ವರದಿಯೊಂದನ್ನು ಸಲ್ಲಿಸಿದೆ. ಕುವೆಂಪು ಅವರು ರಚಿಸಿದ ಮೂಲ ಗೀತೆಯಲ್ಲಿ ಸದ್ಯ “ಜೈನರ ಪೂಜ್ಯ ಉದ್ಯಾನ” ಎಂಬ ಸಾಲಿದ್ದು, ಬೌದ್ಧ ಧರ್ಮದ ನೇರ ಉಲ್ಲೇಖವಿರಲಿಲ್ಲ. ಆದರೆ, ಪ್ರಸ್ತುತ ಪ್ರಸ್ತಾಪದ ಪ್ರಕಾರ ಈ ಸಾಲನ್ನು “ಜೈನ ಬೌದ್ಧರ ಪೂಜ್ಯ ಉದ್ಯಾನ” ಅಥವಾ “ಜೈನರುದ್ಯಾನದ ಜೊತೆಗೆ ಬೌದ್ಧರುದ್ಯಾನ” ಎಂದು ಮಾರ್ಪಡಿಸಲು ಸಮಿತಿ ಸಲಹೆ ನೀಡಿದೆ.
ಬದಲಾವಣೆಯ ಹಿಂದಿರುವ ಮುಖ್ಯ ಕಾರಣ
ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಬೌದ್ಧ ಧರ್ಮದ ಐತಿಹಾಸಿಕ ಮಹತ್ವ, ಸಾಂಸ್ಕೃತಿಕ ಪ್ರಭಾವ ಹಾಗೂ ಅದರ ಅನುಯಾಯಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಹಾಗೂ ಸರ್ವಧರ್ಮ ಸಮನ್ವಯತೆಯ ಆಶಯವನ್ನು ಎತ್ತಿಹಿಡಿಯುವ ಉದ್ದೇಶದಿಂದ ಬಿಳಿಮಲೆ ಸಮಿತಿಯು ಈ ಹೆಜ್ಜೆಯಿಟ್ಟಿದೆ. ಒಂದು ವೇಳೆ ರಾಜ್ಯ ಸರ್ಕಾರವು ಈ ಶಿಫಾರಸನ್ನು ಅಂಗೀಕರಿಸಿದರೆ, ಮುಂದಿನ ದಿನಗಳಲ್ಲಿ ಶಾಲಾ-ಕಾಲೇಜುಗಳು ಮತ್ತು ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಲ್ಲಿ ಈ ಪರಿಷ್ಕೃತ ನಾಡಗೀತೆಯು ಬಳಕೆಗೆ ಬರಲಿದೆ.



