ಹೊಸದಿಗಂತ ವರದಿ, ವಿಜಯನಗರ:
ಹೊಸಪೇಟೆಯ ಜಂಬುನಾಥೇಶ್ವರ ದೇವಸ್ಥಾನದ ಮಹಾರಥೋತ್ಸವದ ವೇಳೆ ತೇರಿನ ಚಕ್ರದಡಿಗೆ ಸಿಲುಕಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ.
ಮೃತನನ್ನು ಹೊಸಪೇಟೆಯ ಪಾರ್ವತಿ ನಗರ ನಿವಾಸಿ ರಾಮು(೪೦) ಎಂದು ಗುರುತಿಸಲಾಗಿದ್ದು, ರಥ ಕಟ್ಟುವ ಕಾರ್ಮಿಕನಾಗಿದ್ದ. ಭಾನುವಾರ ಸಂಜೆ ನೆರವೇರಿದ ಮಹಾರಥೋತ್ಸವದ ವೇಳೆ ರಥದ ಪಕ್ಕದಲ್ಲೇ ಸಾಗುತ್ತಿದ್ದ ರಾಮು, ಬಾಳೆ ಹಣ್ಣಿನ ಮೇಲೆ ಕಾಲಿಟ್ಟು, ಜಾರಿ ಬಿದ್ದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.
ಗಾಯಾಳುನನ್ನು ತಕ್ಷಣ ಅಂಬುಲೆನ್ಸ್ ಮೂಲಕ ೧೦೦ ಬೆಡ್ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದರು.