ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು- ಕಾಸರಗೊಂಡು ರಾಷ್ಟ್ರೀಯ ಹೆದ್ದಾರಿ ಕೆಳಗಿನ ತಲಪಾಡಿಯ ಖಾಸಗಿ ವ್ಯಕ್ತಿಯ ಜಾಗದಲ್ಲಿರುವ ಕೊಳವೊಂದಕ್ಕೆ ಸ್ನಾನ ಮಾಡಲೆಂದು ನೀರಿಗಿಳಿದ ವ್ಯಕ್ತಿಯೋರ್ವ ನೀರಿನಲ್ಲಿ ಮುಳುಗಿ ಕೆಸರಿನಲ್ಲಿ ಹೂತುಹೋಗಿ ಮೃತಪಟ್ಟ ದಾರುಣ ಘಟನೆ ಸೋಮವಾರ ಸಂಜೆ ಸಂಭವಿಸಿದೆ.
ಹೊಸಂಗಡಿ ಬಳಿಯ ದುರ್ಗಿಪ್ಪಳ್ಳ ನಿವಾಸಿ ದಿ.ಸುಬ್ರಾಯ ಆಚಾರ್ಯ ಮತ್ತು ಉಮಾವತಿ ದಂಪತಿಯ ಪುತ್ರ ಹರಿಪ್ರಸಾದ್ ಆಚಾರ್ಯ ಯಾನೆ ಹರೀಶ್ ಆಚಾರ್ಯ (36) ಸಾವನ್ನಪ್ಪಿದ ದುರ್ದೈವಿ.
ಮಂಗಳೂರಿನ ಅಗ್ನಿಶಾಮಕ ದಳದವರು ಆಗಮಿಸಿ ಮೃತದೇಹವನ್ನು ಮೇಲಕ್ಕೆತ್ತಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದರು.
ಹರಿಪ್ರಸಾದ್ ಅವರು ವೆಲ್ಡಿಂಗ್ ಕಾರ್ಮಿಕರಾಗಿದ್ದರು. ಅವರು ನೀರಿಗೆ ಬಿದ್ದ ವಿಷಯ ತಿಳಿದು ಘಟನಾ ಸ್ಥಳಕ್ಕೆ ಸಹೋದರರು ಮತ್ತು ಸಂಬಂಕರು ಆಗಮಿಸಿದರು. ಉಳ್ಳಾಲ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೃತರು ತಾಯಿ, ಸಹೋದರರು, ಸಹೋದರಿಯರನ್ನು ಅಗಲಿದ್ದಾರೆ.