Sunday, January 11, 2026

ಹರಿದ ಕಾಗದದ ತುಂಡು…ಕೊಲೆ ಪ್ರಕರಣವನ್ನೇ ಪತ್ತೆ ಹಚ್ಚಿದ ಸ್ನಿಫರ್ ನಾಯಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದಲ್ಲಿ ಎರಡು ತಿಂಗಳ ಹಿಂದೆ ನಡೆದ ಕೊಲೆ ಪ್ರಕರಣವನ್ನು ಕಾಗದದ ಚೂರಿನ ಸಹಾಯದಿಂದ ಸ್ನಿಫರ್ ನಾಯಿಯೊಂದು ಭೇದಿಸಿರುವ ಘಟನೆ ನಡೆದಿದೆ.

ಮಧ್ಯಪ್ರದೇಶದ ಗಂಗೇಪುರ ಗ್ರಾಮದಲ್ಲಿ ಎರಡು ತಿಂಗಳ ಹಿಂದೆ ನಡೆದ 70 ವರ್ಷದ ರೈತನೊಬ್ಬನನ್ನು ಗಂಟಲು ಸೀಳಿ ಕೊಲೆ ಮಾಡಲಾಗಿತ್ತು. ಇದು ಗ್ರಾಮಸ್ಥರನ್ನೆಲ್ಲ ಬೆಚ್ಚಿ ಬೀಳಿಸಿತ್ತು. ಅಪರಾಧಿಗಳು ಯಾವುದೇ ಕುರುಹು ಬಿಡದೇ ಇದ್ದುದರಿಂದ ಈ ಪ್ರಕರಣವನ್ನು ಭೇದಿಸುವುದು ಪೊಲೀಸರಿಗೆ ಸವಾಲಾಗಿತ್ತು. ಆದರೆ ಸ್ನಿಫರ್ ನಾಯಿ ಕೊಲೆ ಪ್ರಕರಣವನ್ನು ಭೇದಿಸಿದೆ.

ಎರಡು ತಿಂಗಳ ಹಿಂದೆ ಶಿವನಾರಾಯಣ ಕೌರವ (70) ಎಂಬವರ ಶವ ಅವರ ಹೊಲದಲ್ಲಿ ಗಂಟಲು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಯಾವುದೇ ಕುರುಹುಗಳು, ಶಂಕಿತರಿಲ್ಲದ್ದ ಕಾರಣ ಈ ಪ್ರಕರಣ ನಿಗೂಢವಾಗಿತ್ತು. ಆದರೆ ಹರಿದ ಕಾಗದದ ತುಂಡು ಮತ್ತು ಸ್ನಿಫರ್ ನಾಯಿ ಪ್ರಕರಣಕ್ಕೊಂದು ತಾರ್ಕಿಕ ಅಂತ್ಯ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿ ಭಿಂದ್‌ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಶಿವನಾರಾಯಣ ಕೌರವ ಅವರ ಸೋದರಳಿಯ ಶಿವರತನ್ ಕೌರವ, ಮೊಮ್ಮಗ ಮಹೇಂದ್ರ ಕೌರವ ಮತ್ತು ಗ್ರಾಮದ ಬಾದಮ್ ಸಿಂಗ್ ಎಂದು ಗುರುತಿಸಲಾಗಿದೆ. ಇವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಹತ್ಯೆಗೆ ಬಳಸಲಾದ ಕೊಡಲಿ ಮತ್ತು ಕಬ್ಬಿಣದ ರಾಡ್ ಅನ್ನು ವಶಕ್ಕೆ ಪಡೆಯಲಾಗಿದೆ.

ಪ್ರಕರಣದ ಕುರಿತು ಮಾಹಿತಿ ನೀಡಿದ ಉಪವಿಭಾಗೀಯ ಪೊಲೀಸ್ ಅಧಿಕಾರಿ ಪ್ರವೀಣ್ ತ್ರಿಪಾಠಿ, ಶಿವನಾರಾಯಣ ಕೌರವ ಅವರ ಕೊಲೆಗೆ ಆಸ್ತಿ ವಿವಾದ ಮುಖ್ಯ ಕಾರಣವಾಗಿದೆ. ಸುಮಾರು 31 ಎಕರೆ ಪೂರ್ವಜರ ಆಸ್ತಿಗಾಗಿ ಶಿವನಾರಾಯಣ ಕೌರವ ಅವರನ್ನು ಕೊಲೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಶಿವನಾರಾಯಣ್ ಅವರ ಸಹೋದರಿ ಸುರ್ಜಾ ದೇವಿ ಅವರ ಸಾವಿನ ಬಳಿಕ ಅವರ ಪತಿ ರಾಮಸ್ವರೂಪ್ ಗೌತಮ್ ಅವರು ಪೂರ್ವಜರ ಭೂಮಿಯಲ್ಲಿ ತಮ್ಮ ಪತ್ನಿಯ ಪಾಲನ್ನು ಕೋರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದರು. ಶಿವನಾರಾಯಣ್ ತಮ್ಮ ಸಹೋದರಿಯ ಕಾನೂನುಬದ್ಧ ಹಕ್ಕಿಗೆ ಬೆಂಬಲವನ್ನು ಕೂಡ ನೀಡಿದರು. ಆದರೆ ಅವರ ಸೋದರಳಿಯ ಶಿವರತನ್ ಮತ್ತು ಮೊಮ್ಮಗ ಮಹೇಂದ್ರ ವಿವಾದಿತ ಭೂಮಿಯನ್ನು ಆಕ್ರಮಿಸಿಕೊಂಡಿದ್ದರು. ಅವರ ವಿರೋಧದ ನಡುವೆ ಶಿವನಾರಾಯಣ್ ಅವರು ಸಹೋದರಿಯ ಹಕ್ಕಿಗೆ ಬೆಂಬಲ ನೀಡಿದ್ದರಿಂದ ಅವರು ಆಕ್ರೋಶಗೊಂಡು ಬಾದಮ್ ಸಿಂಗ್ ಸಹಾಯದಿಂದ ಶಿವನಾರಾಯಣ್ ಅವರ ಕೊಲೆಗೆ ಸಂಚು ರೂಪಿಸಿದರು ಎಂದು ಹೇಳಿದ್ದಾರೆ.

ನವೆಂಬರ್ 14ರಂದು ರಾತ್ರಿ ಶಿವನಾರಾಯಣ್ ಅವರು ತಮ್ಮ ಹೊಲದಲ್ಲಿ ಮಲಗಿ ಬೆಳೆಗಳನ್ನು ಕಾಯುತ್ತಿದ್ದ ವೇಳೆ ದಾಳಿಕೋರರು ಕೊಡಲಿಯಿಂದ ಅವರ ಕತ್ತು ಸೀಳಿ ಕೊಂದು ಕತ್ತಲಲ್ಲಿ ಓಡಿ ತಪ್ಪಿಸಿಕೊಂಡರು. ತನಿಖೆ ವೇಳೆ ಶವದ ಬಳಿ ಸಣ್ಣ, ಒಂದು ಸಣ್ಣ ಕಾಗದದ ತುಂಡು ಸಿಕ್ಕಿತ್ತು. ಅದರಲ್ಲಿ ಹಲವಾರು ಹೆಸರುಗಳಿದ್ದರೂ ಅದನ್ನು ಓದಲು ಸಾಧ್ಯವಾಗಲಿಲ್ಲ. ಹೀಗಾಗಿ ಪೊಲೀಸರು ವಿಧಿವಿಜ್ಞಾನ ತಂಡ ಮತ್ತು ಶ್ವಾನ ದಳವನ್ನು ಕರೆಸಿದರು. ಕಾಗದದ ವಾಸನೆ ನೋಡಿದ ಸ್ನಿಫರ್ ನಾಯಿ ನೇರವಾಗಿ ಬಾದಮ್ ಸಿಂಗ್ ಮನೆಗೆ ಪೊಲೀಸರನ್ನು ಕರೆದುಕೊಂಡು ಹೋಯಿತು. ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಎಲ್ಲವೂ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.

error: Content is protected !!