ಹೊಸದಿಗಂತ ವರದಿ ಧಾರವಾಡ:
ಕಾರ್ಯಕರ್ತರಿಗೆ ಅನಗತ್ಯ ತೊಂದರೆ ನೀಡದಂತೆ ಪೊಲೀಸ್ ಅಧಿಕಾರಿಗೆ ವಿಧಾನಪರಿಷತ್ ಅಭ್ಯರ್ಥಿ ಬಸವರಾಜ ಹೊರಟ್ಟಿ ತಾಕೀತು ಮಾಡಿದ ಘಟನೆ ಇಲ್ಲಿನ ಶಾರದಾ ಸ್ಕೂಲ್ ಮತಗಟ್ಟೆ ಬಳಿ ನಡೆಯಿತು. ಮತಗಟ್ಟೆಯ ವ್ಯಾಪ್ತಿಯ ಹೊರಗೆ ಟೇಬಲ್, ಕುರ್ಚಿ ಹಾಕಿದ್ದರೂ ಕೂಡ ಅಲ್ಲಿಗೂ ಬಂದು ಪೊಲೀಸರು ಅನಗತ್ಯ ತೊಂದರೆ ನೀಡುತ್ತಿದ್ದಾರೆಂದು ಬಿಜೆಪಿ ಕಾರ್ಯಕರ್ತರು ಬಸವರಾಜ ಹೊರಟ್ಟಿಯವರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಹೊರಟ್ಡಿಯವರು ಮಹಿಳಾ ಪೊಲೀಸ್ ಅಧಿಕಾರಿ ಕರೆಸಿ ತರಾಟೆಗೆ ತೆಗೆದುಕೊಂಡರು. ನಿಯಮ ಉಲ್ಲಂಘನೆ ಆಗಿದ್ದರೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿ. ನಮ್ಮ ಕಾರ್ಯಕರ್ತರು ವ್ಯಾಪ್ತಿ ಪ್ರದೇಶದ ಹೊರಗೆ ಟೆಂಟ್ ಹಾಕಿಕೊಂಡಿದ್ದಾರೆ. ಅನಗತ್ಯ ತೊಂದರೆ ನೀಡುವುದು ಸರಿಯಲ್ಲ ಎಂದರು.
ಜೆಎಸ್ಎಸ್ ಕಾಲೇಜು ಮತಗಟ್ಟೆ ಬಳಿ ನನ್ನ ಭಾವಚಿತ್ರ ಹಾಗೂ ಪಕ್ಷದ ಗುರುತಿರುವ ಪೋಸ್ಟರ್ ಹಾಕಿರುವುದು ನನ್ನ ಗಮನಕ್ಕೆ ಬಂದಿಲ್ಲ. ಕಾಂಗ್ರೆಸ್ನವರು ದೂರು ನೀಡುವುದಾದರೆ ನೀಡಲಿ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದರು.