ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು ನಗರದಲ್ಲಿ ಯಾವುದೇ ಪಬ್ ದಾಳಿ ಪ್ರಕರಣ ನಡೆದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬಲ್ಮಠದಲ್ಲಿ ದಾಳಿ ನಡೆದಿದೆ ಎನ್ನಲಾದ ರೆಸ್ಟೋರೆಂಟ್, ಪಬ್ ಬಹಳಷ್ಟು ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಸಂಘಟನೆಗೆ ಸೇರಿದವರು ಎನ್ನಲಾದ ಐದಾರು ಮಂದಿ ಬಂದು, ಪಬ್ ಒಳಗೆ ಅಪ್ರಾಪ್ತ ವಯಸ್ಕರು ಇದ್ದಾರೆ ಎಂದು ಬೌನ್ಸರ್ ಅವರುಗಳಿಗೆ ಹೇಳಿದ್ದಾರೆ. ತಕ್ಷಣ ಮ್ಯಾನೇಜರ್ ಪರಿಶೀಲಿಸಿದ್ದು, ಕಾಲೇಜೊಂದರ ವಿದ್ಯಾರ್ಥಿಗಳಿರುವುದು ಗಮನಿಸಿ ಅವರನ್ನು ತಕ್ಷಣ ಹೊರ ಹೋಗಲು ಹೇಳಿದ್ದಾರೆ. ಈ ಬಗ್ಗೆ ಬೌನ್ಸರ್ ಗಳ ಹೇಳಿಕೆ ಪಡೆಯಲಾಗಿದ್ದು, ಸಂಘಟನೆ ಕಾರ್ಯಕರ್ತರು ಎನ್ನುವವರು ಪಬ್ ಒಳಗೆ ಹೋಗಿಲ್ಲ, ಯಾವುದೇ ದಾಳಿ ಮಾಡಿಲ್ಲ. ಹೊರಗಿನಿಂದಲೇ ಮಾತನಾಡಿ ಹಿಂತಿರುಗಿದ್ದಾರೆ ಎಂದು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಸಿಸಿ ಟೀವಿ ಪರಿಶೀಲನೆ
ಘಟನೆಗೆ ಸಂಬಂಧಿಸಿ ಸಿಸಿಟಿವಿ ದಾಖಲೆ ಪರಿಶೀಲಿಸಲಾಗುವುದು. ಕಾನೂನು ಕೈಗೆತ್ತಿಕೊಂಡ ಘಟನೆ ಕಂಡಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.