ಸಮುದ್ರಕ್ಕೆ ಹಾರಿ ಪ್ರಿಯತಮೆ ಆತ್ಮಹತ್ಯೆ ಯತ್ನ: ರಕ್ಷಣೆಗೆ ಧಾವಿಸಿದ ಪ್ರಿಯಕರ ಸಾವು

ಹೊಸದಿಗಂತ ವರದಿ, ಮಂಗಳೂರು:

ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ತನ್ನ ಪ್ರಿಯತಮೆಯ ರಕ್ಷಣೆಗೆ ಸಮುದ್ರಕ್ಕೆ ಜಿಗಿದ ಯುವಕ ಸಮುದ್ರದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಉಳ್ಳಾಲ ಸೋಮೇಶ್ವರ ಬೀಚ್‌ನಲ್ಲಿ ನಡೆದಿದೆ.
ಮೃತ ಯುವಕನನ್ನು ಮುನ್ನೂರು ಗ್ರಾಮದ ಸೋಮನಾಥ ಉಳಿಯ ನಿವಾಸಿ ಲಾಯ್ಡ್ ಡಿಸೋಜ(೨೮) ಎಂದು ಗುರುತಿಸಲಾಗಿದೆ. ಸಮುದ್ರಕ್ಕೆ ಹಾರಿದ್ದ ಈತನ ಪ್ರಿಯತಮೆ ಅಶ್ವಿತಾ ಫೆರಾವೊ ಎಂಬಾಕೆಯನ್ನು ಜೀವರಕ್ಷಕ ಈಜುಗಾರರ ತಂಡ ರಕ್ಷಿಸಿದೆ. ಆಕೆ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಲಾಯ್ಡ್ ಡಿಸೋಜ ಮತ್ತು ಅಶ್ವಿತಾ ಫೆರಾವೊ ಕಳೆದ ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದು, ಈ ನಡುವೆ ಲಾಯ್ಡ್ ಡಿಸೋಜ ಮತ್ತೊಬ್ಬಾಕೆಯನ್ನು ಪ್ರೀತಿಸುತ್ತಿದ್ದಾನೆ ಎಂಬ ಅನುಮಾನ ಅಶ್ವಿತಾಳನ್ನು ಕಾಡಿತ್ತು. ಇದನ್ನು ಮಾತುಕತೆ ಮೂಲಕ ಬಗೆಹರಿಸಲು ಸಮುದ್ರ ತೀರದಲ್ಲಿ ಸೇರಿದ್ದರು. ಈ ಸಂದರ್ಭ ಲಾಯ್ಡ್ ಡಿಸೋಜ, ಅಶ್ವಿತಾ ಮತ್ತು ಆತನ ಗೆಳತಿ ಡಕ್ಲಿನ್ ವೇಗಸ್ ಎಂಬಾಕೆ ಕೂಡ ಇದ್ದರು. ಲಾಯ್ಡ್ ಮತ್ತು ಅಶ್ವಿತಾ ನಡುವೆ ಮಾತಿನ ಚಕಮಕಿ ನಡೆದಿದ್ದು, ಆಕೆ ಸಮುದ್ರಕ್ಕೆ ಹಾರಿದ್ದಾಳೆ. ತಕ್ಷಣ ಆಕೆಯ ರಕ್ಷಣೆಗೆ ಧಾವಿಸಿದ ಲಾಯ್ಡ್ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!