ಹೊಸ ದಿಗಂತ ವರದಿ, ಬಳ್ಳಾರಿ:
ಪಿಎಫ್ಐ ಸೇರಿದಂತೆ ಭಯೋತ್ಪಾದಕ ವಿವಿಧ ಸಂಘಟನೆಗಳೊಂದಿಗೆ ಗುರುತಿಸಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳ ತಂಡ ನಗರದ 9 ಕಡೆ ಏಕಕಾಲಕ್ಕೆ ದಾಳಿ ನಡೆಸಿದೆ.
ಈ ವೇಳೆ ವಿವಿಧ ಆರೋಪ ಹೊತ್ತಿರುವ ಸಮೀವುಲ್ಲ ಎನ್ನುವ ಆರೋಪಿಯನ್ನು ಬಂಧಿಸಿರುವ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ ಐಸಿಸ್ ಹಾಗೂ ಭಯೋತ್ಪಾದಕರೊಂದಿಗೆ ಇಲ್ಲಿನ ಕೆಲವರು ನಂಟು ಹೊಂದಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಹೈದ್ರಾಬಾದ್ ನಿಂದ ಆಗಮಿಸಿದ ಎನ್ಐ ಎ ಅಧಿಕಾರಿಗಳ ತಂಡ ಇಲ್ಲಿನ ಪೊಲೀಸರ ಸಹಕಾರದಿಂದ ನಗರದ ಜಾಗೃತಿನಗರ, ಕೌಲ್ ಬಜಾರ್ ಸೇರಿದಂತೆ 9 ಕಡೆ ಏಕಕಾಲಕ್ಕೆ ದಾಳಿ ನಡೆಸಿ ಮಹತ್ವದ ಮಾಹಿತಿ ಕಲೆ ಹಾಕಿದ್ದು, ಹಲವರನ್ನು ವಶಕ್ಕೆ ಪಡೆದು ವಿಚಾರಣೆಗೆ ಮುಂದಾಗಿದ್ದಾರೆ.
ಕಳೆದ ಡಿ.2 ರಂದುಎನ್ಐಎ ಅಧಿಕಾರಿಗಳ ತಂಡ ನಗರದ ಕೌಲ್ ಬಜಾರ್ ನಲ್ಲಿ ದಾಳಿ ನಡೆಸಿ ಮಹೇಂದ್ರ ಎನ್ನುವ ಆರೋಪಿಯನ್ನು ವಶಕ್ಕೆ ಪಡೆದಿದ್ದರು. ನಂತರ ಸೋಮವಾರ ದಾಳಿ ನಡೆಸಿದ್ದು, ಮಹತ್ವದ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ. ಬಂಧಿತ ಸಮೀವುಲ್ಲ ಎನ್ನುವವರು, ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದು, ಈತನ ಹೆಸರು ನಿಖಿಲ್ ಸೂಪಿಯನ್ ಎಂದಿತ್ತು ಎಂದು ಹೇಳಲಾಗುತ್ತಿದೆ. ಈತ ಪಿಎಪ್ಐ ಸಂಘಟನೆಯಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಹೊರ ಬಿದ್ದಿದೆ.