ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಗೊಂಡಾದಲ್ಲಿ ಗುರುವಾರ ಚಂಡೀಗಢ-ದಿಬ್ರೂಗಢ ಎಕ್ಸಪ್ರೆಸ್ ರೈಲು ಹಳಿತಪ್ಪಿದ ಪ್ರಕರಣ ಸಂಬಂಧಿಸಿ ತನಿಖೆ ನಡೆಸಿದ ಹಿರಿಯ ರೈಲ್ವೆ ಅಧಿಕಾರಿಗಳ ತಂಡವು, ರೈಲು ಹಳಿಯನ್ನು ಸರಿಯಾಗಿ ಜೋಡಿಸದಿರುವುದೇ ಅಪಘಾತಕ್ಕೆ ಕಾರಣ ಎಂದು ತಿಳಿಸಿದೆ.
ರೈಲು ಹಳಿಯಲ್ಲಿನ ಸಮಸ್ಯೆಯಿಂದಾಗಿ ಅಪಘಾತ ನಡೆದಿದೆ ಎಂದು 5 ಅಧಿಕಾರಿಗಳನ್ನೊಳಗೊಂಡ ತನಿಖಾ ತಂಡವು ತಿಳಿಸಿದೆ. ಆದರೆ ಅದರಲ್ಲಿ ಒಬ್ಬ ಅಧಿಕಾರಿ ಈ ಅಭಿಪ್ರಾಯವನ್ನು ಒಪ್ಪಿಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.
ತನಿಖಾ ಸಮಿತಿಯ ವರದಿಯ ಆಧಾರದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವುದು ಸರಿಯಲ್ಲ ಎಂದು ಈಶಾನ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
‘ರೈಲ್ವೆ ಸುರಕ್ಷತಾ ವಿಭಾಗದ ತನಿಖೆಯು ಆರಂಭವಾಗಿದ್ದು, ಮೊದಲ ವಿಚಾರಣೆ ನಡೆದಿದೆ. ತಾಂತ್ರಿಕ ವಿಚಾರಗಳೊಂದಿಗೆ ಸಮಗ್ರ ತನಿಖೆ ನಡೆಯಲಿದೆ. ಸಮಿತಿಯ ತನಿಖೆಯಲ್ಲಿ ನಿರ್ಣಾಯಕ ಅಂಶಗಳು ಬೆಳಕಿಗೆ ಬಂದಿಲ್ಲ. ಆದ್ದರಿಂದ ಇದು ಸಕಾಲಿಕವಲ್ಲ’ ಎಂದು ಹೇಳಿದ್ದಾರೆ.
ಉತ್ತರಪ್ರದೇಶದ ಗೊಂಡಾ ಜಿಲ್ಲೆಯ ಮೋತಿಗಂಜ್ ಮತ್ತು ಝಿಲಾಹಿ ರೈಲು ನಿಲ್ದಾಣಗಳ ಮಧ್ಯೆ ಚಂಡೀಗಢ-ದಿಬ್ರೂಗಢ ಎಕ್ಸಪ್ರೆಸ್ ರೈಲು ಗುರುವಾರ ಹಳಿ ತಪ್ಪಿತ್ತು. ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು.