ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದ ಖಾಸಗಿ ಬಸ್ಸ್ಟ್ರಾಂಡ್ನಲ್ಲಿ ನಿನ್ನೆ ತಡರಾತ್ರಿ ಭೀಕರ ಅಗ್ನಿ ಅವಘಡ ಸಂಭವಿಸಿದೆ.
ಖಾಸಗಿ ಬಸ್ ನಿಲ್ದಾಣದ ಒಳಗಿರುವ ಮೊಬೈಲ್ ಶಾಪ್ ಒಂದರಲ್ಲಿ ಬೆಂಕಿ ಹೊತ್ತಿದ್ದು, ಇಡೀ ಅಂಗಡಿಯನ್ನೇ ಆವರಿಸಿದೆ. ಅಂಗಡಿಯಲ್ಲಿದ್ದ ಎಲ್ಲ ಬೆಲೆಬಾಳುವ ವಸ್ತುಗಳು ಸುಟ್ಟುಹೋಗಿವೆ. ದಟ್ಟ ಹೊಗೆ ಇಡೀ ಬಸ್ ಸ್ಟಾಂಡ್ ತುಂಬಾ ಆವರಿಸಿದೆ.
ಈ ಅವಘಡದಲ್ಲಿ ಮನುಷ್ಯರಿಗೆ ಯಾವುದೇ ಹಾನಿ ಆಗಿಲ್ಲ. ವಸೀಂ ಎನ್ನುವವರಿಗೆ ಸೇರಿದ ಮೊಬೈಲ್ ಅಂಗಡಿಯಲ್ಲಿ ಮೊದಲು ಬೆಂಕಿ ಹೊತ್ತಿದೆ, ಬೆಂಕಿ ಧಗಧಗ ಉರಿದು ಹೊರಗೆ ಕಾಣುವಷ್ಟು ದೊಡ್ಡದಾಗುವವರೆಗೂ ಯಾರಿಗೂ ಬೆಂಕಿ ಬಗ್ಗೆ ಮಾಹಿತಿಯೇ ಇರಲಿಲ್ಲ. ಶಾರ್ಟ್ ಸರ್ಕಿಟ್ ಹೀಗೆ ಆಗಿರಬಹುದು ಎಂದು ಮೇಲ್ನೋಟಕ್ಕೆ ಹೇಳಲಾಗುತ್ತಿದೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ದೊಡ್ಡಪೇಟೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಶಿವಮೊಗ್ಗ ನಗರ ಕ್ಷೇತ್ರದ ಶಾಸಕರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.