ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅವರ ತವರು ಗ್ರಾಮವಾದ ಹಾಸನ ತಾಲೂಕಿನ ಮುತ್ತಿಗೆಹಿರೇಹಳ್ಳಿಯಲ್ಲಿ ಆಕ್ರಂದನ ಮುಗಿಲುಮುಟ್ಟಿದೆ. ದೇಶದ ಅತ್ಯುನ್ನತ ಪ್ರಧಾನಿ ಹುದ್ದೆಯ ನೆರಳಿನಲ್ಲಿದ್ದರೂ, ಅಹಂಕಾರವಿಲ್ಲದೆ ಸದಾ ಭಕ್ತಿ ಮಾರ್ಗದಲ್ಲಿ ಮುಳುಗಿದ್ದ ಚೆನ್ನಮ್ಮ ಅಗಲಿಕೆ ಇಡೀ ಗ್ರಾಮವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
ದೈವಭಕ್ತಿಗೆ ಸಾಕ್ಷಿಯಾದ ಮೂರು ದೇವಸ್ಥಾನಗಳು
ಚೆನ್ನಮ್ಮನವರು ಹುಟ್ಟೂರಿನ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ತಮ್ಮ ಸ್ವಗ್ರಾಮ ಮುತ್ತಿಗೆಹಿರೇಹಳ್ಳಿಯಲ್ಲಿ ಅವರು ಸ್ವತಃ ಆಸಕ್ತಿ ವಹಿಸಿ ಮೂರು ಪ್ರಮುಖ ದೇವಸ್ಥಾನಗಳನ್ನು ನಿರ್ಮಿಸಿದ್ದರು. ಅದರಲ್ಲಿ ಪ್ರಮುಖವಾಗಿ ಚೆನ್ನಾಂಬಿಕಾ ದೇವಾಲಯ. ಐದು ಹಳ್ಳಿಗಳ ಸೇರಿ ನಡೆಸುವ ಈ ಜಾತ್ರೆಯಲ್ಲಿ, ಚೆನ್ನಮ್ಮನಿಗೆ ವಿಶೇಷ ಗೌರವ ನೀಡಲಾಗುತ್ತಿತ್ತು. ಅವರು ಪೂಜೆ ಸಲ್ಲಿಸಿ ಹೊರಬಂದ ಮೇಲಷ್ಟೇ ಭಕ್ತರಿಗೆ ಅವಕಾಶ ನೀಡುವ ವಿಶೇಷ ಸಂಪ್ರದಾಯವಿತ್ತು.
ಇದನ್ನೂ ಓದಿ:
ಊರಿನ ಜಾತ್ರೆಯಲ್ಲಿ ಮೊದಲ ಗೌರವ
ಮುತ್ತಿಗೆಹಿರೇಹಳ್ಳಿಯಲ್ಲಿ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ವಿಶೇಷ ಪೂಜೆಗಳ ಸಂದರ್ಭದಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಮೊದಲು ಚೆನ್ನಮ್ಮನವರಿಗೆ ಗೌರವ ಸಲ್ಲಿಸುತ್ತಿದ್ದರು. ಜಾತ್ರೆಯ ಪ್ರಥಮ ಪೂಜೆಯನ್ನು ಸ್ವೀಕರಿಸುತ್ತಿದ್ದ ಊರಿನ ಹೆಣ್ಣುಮಗಳು ಇಂದು ಜಗತ್ತನ್ನೇ ಬಿಟ್ಟು ಹೋಗಿರುವುದನ್ನು ಗ್ರಾಮದ ಹಿರಿಯರು ಕಣ್ಣೀರು ಹಾಕುತ್ತಾ ಸ್ಮರಿಸುತ್ತಿದ್ದಾರೆ.



