ಹೊಸದಿಗಂತ ವರದಿ,ಮಡಿಕೇರಿ:
ಹಾಡಹಗಲೇ ಮನೆಗೆ ನುಗ್ಗಿದ ಕಳ್ಳನೊಬ್ಬ ಗೃಹಿಣಿಯ ಕುತ್ತಿಗೆಯಲ್ಲಿದ್ದ ಚಿನ್ನದ ಚೈನ್ ಮತ್ತು ಒಂದು ಕಿವಿಯೋಲೆಯನ್ನು ಕಿತ್ತು ಪರಾರಿಯಾದ ಘಟನೆ ಮಡಿಕೇರಿ ಹೃದಯ ಭಾಗದಲ್ಲಿ ನಡೆದಿದೆ.
ನಗರದ ಚೆಸ್ಕಾಂ ಕಚೇರಿಗೆ ಹೋಗುವ ಕೋಟೆ ಹಿಂಭಾಗದ ರಸ್ತೆಯ ಕೊನೆಯಲ್ಲಿರುವ ಒಂಟಿ ಮನೆಯಲ್ಲಿ ಗೃಹಿಣಿ ಮಾತ್ರವೇ ಇದ್ದರು. ಮಂಗಳವಾರ ಮಧ್ಯಾಹ್ನ 1.30 ರಿಂದ ಧಾರಾಕಾರ ಮಳೆ ಸುರಿಯುತ್ತಿದ್ದ ಸಂದರ್ಭವನ್ನು ಬಳಸಿಕೊಂಡ ಕಳ್ಳ ಮನೆಯ ಬಾಗಿಲು ತಳ್ಳಿ ಒಳನುಗ್ಗಿ ಟವಲ್ನಲ್ಲಿ ಮಹಿಳೆಯ ಮುಖಮುಚ್ಚಿ ಕುತ್ತಿಗೆಯಲ್ಲಿದ್ದ 60 ಗ್ರಾಂ ಚಿನ್ನದ ಚೈನ್ ಮತ್ತು ಒಂದು ಕಿವಿ ಓಲೆಯನ್ನು ಕಿತ್ತೊಯ್ದಿದ್ದಾನೆ.
ತಕ್ಷಣವೇ ಮನೆಯೊಡತಿ ತನ್ನ ಪತಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಮಡಿಕೇರಿ ನಗರ ಠಾಣೆಯಲ್ಲಿ ದಿನೇಶ್ ರಾವ್ ಎಂಬವರು ದೂರು ನೀಡಿದ್ದಾರೆ.
ಘಟನಾ ಸ್ಥಳಕ್ಕೆ ನಗರ ವೃತ್ತ ನಿರೀಕ್ಷಕ ಶಿವಶಂಕರ್, ಠಾಣಾಧಿಕಾರಿ ಶ್ರೀನಿವಾಸ್, ಕ್ರೈಂ ವಿಭಾಗದ ಠಾಣಾಧಿಕಾರಿ ರಾಧಾ, ಕ್ರೈಂ ಸಿಬ್ಬಂದಿಗಳಾದ ದಿನೇಶ್, ನಾಗರಾಜ್ ವಾಹನ ಚಾಲಕ ದೇವರಾಜು ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಟ್ಟು 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳುವಾಗಿದೆ ಎಂದು ದೂರುದಾರ ದಿನೇಶ್ ರಾವ್ ಅವರು ಮಾಹಿತಿ ನೀಡಿದ್ದಾರೆ.