ಹೊಸದಿಗಂತ, ವರದಿ, ಮೈಸೂರು:
ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವನ್ನು ಹುಲಿಯೊಂದು ಹೊತ್ತೊಯ್ದಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಏಚಗುಂಡ್ಲ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಾಸ್ತಮ ದೇವಾಲಯದ ಮುಂಭಾಗದಲ್ಲಿ ಹುಲಿ ಕಾಣಿಸಿಕೊಂಡಿದೆ. ಬೆಳಗಿನ ಜಾವದಲ್ಲಿ ಪಟೇಲ್ ಮಹದೇವಪ್ಪ ಎಂಬುವವರ ಕೊಟ್ಟಿಗೆಗೆ ಏಕಾಏಕಿ ನುಗ್ಗಿದ್ದ ಹುಲಿ ಕರುವನ್ನು ಹೊತ್ತೊಯ್ದಿದೆ.
ಹುಲಿ ಬರುತ್ತಿರುವ ದೃಶ್ಯವು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಹುಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಮೂಡಿದ್ದು, ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮೈಸೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹುಲಿಗಳು ಜನ, ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದು, ಅವುಗಳನ್ನು ಸೆರೆ ಹಿಡಿಯುವುದಕ್ಕಾಗಿ ಚಿರತೆ ಕಾರ್ಯಪಡೆ ಹಾಗೂ ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಮೈಸೂರಿನ ದಡದಹಳ್ಳಿಯ ತೋಟವೊಂದರಲ್ಲಿ ಹುಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅರಣ್ಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಹುಲಿ ತಾಯಿಯಿಂದ ಬೇರ್ಪಟ್ಟಿರುವ ಹುಲಿಯಾಗಿದ್ದು, ಇದು ಮೈಸೂರಿನ ಸುತ್ತಮುತ್ತ ಗ್ರಾಮಗಳಲ್ಲಿ ಓಡಾಡುತ್ತಿದೆ ಎನ್ನಲಾಗಿದೆ.
ಹುಲಿ ಆಗಾಗ ಸ್ಥಳ ಬದಲಾವಣೆ ಮಾಡುತ್ತಿರುವುದರಿಂದ ಕಾರ್ಯಾಚರಣೆಯನ್ನ ಪದೇ ಪದೇ ಬದಲಾಯಿಸುವ ಅನಿವಾರ್ಯತೆ ಎದುರಾಗಿದೆ. ಹುಲಿ ಚಲನವಲನ ಪತ್ತೆಗೆ ಟ್ರಾ÷್ಯಪ್ ಕ್ಯಾಮರಾ, ನೆಟ್ ವರ್ಕ್ ಕ್ಯಾಮರಾ, ಐ ಆರ್ ಕ್ಯಾಮರಾ ಬಳಸಲಾಗುತ್ತಿದೆ. ಹುಲಿ ಸೆರೆಗೆ ಬೋನಿರಿಸಲಾಗಿದೆ. ಸಾರ್ವಜನಿಕರು ಹುಲಿ ಕಾಣಿಸಿಕೊಂಡರೆ ಸಹಾಯವಾಣಿ 1926 ಮಾಹಿತಿ ಮಾಡಿ. ಹುಲಿ ಕಾಣಿಸಿಕೊಂಡ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬಾರದು. ಅರಣ್ಯ ಇಲಾಖೆ ಸಿಬ್ಬಂದಿಗಳ ಕಾರ್ಯಾಚರಣೆಗೆ ಸಹಕಾರ ನೀಡಬೇಕು ಎಂದು ಸಾರ್ವಜನಿಕರಲ್ಲಿ ಮೈಸೂರು ಅರಣ್ಯ ಇಲಾಖೆ ಮನವಿ ಮಾಡಿದೆ.