ಹೊಸದಿಗಂತ, ವರದಿ, ಹುಬ್ಬಳ್ಳಿ:
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮುಸ್ಲಿಂ ಸಮುದಾಯದ ಮೂವರಿಗೆ ಅವಕಾಶ ನೀಡಬೇಕು ಎಂದು ನಮ್ಮ ಬೇಡಿಕೆ ಇದೆ. ಹೈಕಮಾಂಡ ಏನು ತೀರ್ಮಾನ ತೆಗೊಳ್ಳುತ್ತದೆ ನೋಡೋಣ. ಕಾಂಗ್ರೆಸ್ ಹೈಕಮಾಂಡ ಪಕ್ಷವಾಗಿದೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಹೇಳಿದರು.
ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಬೆಂಗಳೂರ ಸೆಂಟ್ರಲ್, ಹಾವೇರಿ ಹಾಗೂ ಬೀದರ್ ಲೋಕಸಭಾ ಕ್ಷೇತ್ರಗಳಲ್ಲಿ ಮುಸ್ಲಿಂ ಸಮುದಾಯದವರಿಗೆ ಟೀಕೆಟ್ ನೀಡಲು ಮನವಿ ಸಲ್ಲಿಸಿದ್ದೇವೆ ಎಂದರು.
ಕಾಂಗ್ರೆಸ್ ಗೆಲುವು ಸಾಧಿಸುವ ಎಷ್ಟು ಸ್ಪರ್ಧಿಗಳಿಗೂ ಟಿಕೆಟ್ ನೀಡಲು ಸಿದ್ಧವಿದೆ. ಆದರೆ ಗೆಲುವು ಸಾಧಿಸುವವರು ಬೇಕಲ್ಲ. ಪಕ್ಷ ಸಮಾಜದ ಐವರಿಗೂ ಟಿಕೆಟ್ ನೀಡಲು ಸಿದ್ಧವಿದೆ. ಟಿಕೆಟ್ ಪಡೆಯುವುದು ಮುಖ್ಯವಲ್ಲ ಗೆಲ್ಲುವುದು ಮುಖ್ಯ ಎಂದು ತಿಳಿಸಿದರು.
ಸೋಲು ಗೆಲುವು ಮತದಾರರ ಕೈಯಲ್ಲಿ ಇದೆ. ಆದ್ದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಪಕ್ಷ ಹೈಕಮಾಂಡ ಪಕ್ಷವಾಗಿದ್ದು, ಅವರ ತೀರ್ಮಾನ ಅಂತಿಮವಾಗಿದೆ ಎಂದು ಹೇಳಿದರು.
ಬಿಜೆಪಿಗೆ ಅಭಿವೃದ್ಧಿ ಬೇಕಿಲ್ಲ: ಬಿಜೆಪಿ ಮತಯಾಚನೆ ಮಾಡುವಾಗ ಜನರ ಮುಂದೆ ಹೇಳಿಕೊಳ್ಳಲು ಯಾವುದೇ ಅಭಿವೃದ್ಧಿ ಕಾರ್ಯಗಳಲಿಲ್ಲ. ಆದರೆ ಕಾಂಗ್ರೆಸ್ ಇತಿಹಾಸ ನೋಡಿದರೆ ನಾವು ಮಾಡಿದ ಅಭಿವೃದ್ಧಿ ಕಾರ್ಯಗಳ ಮುಂದಿಟ್ಟುಕೊಂಡು ಜನರ ಮುಂದೆ ಹೋಗುತ್ತೇವೆ. ಆದರೆ ಬಿಜೆಪಿ ಹಿಂದೂ ಮುಸ್ಲಿಂ ಬಗ್ಗೆ ಮಾತನಾಡುತ್ತಾರೆ. ಹಿಂದೂ ಬೇಡಾ ಮುಸ್ಲಿಂ ಬೇಡಾ ಅವರಿಗೆ ಅಕಾರ ಬೇಕಾಗಿದೆ ಎಂದು ಹರಿಹಾಯ್ದರು.
ಸಿಎಂ ಕುರ್ಚಿ ಖಾಲಿ ಇಲ್ಲ
ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ. ಸದ್ಯ ಸಿದ್ದರಾಮಯ್ಯ ಅವರು ನಮ್ಮ ಸಿಎಂ ಆಗಿದ್ದಾರೆ. ಸಿಎಂ ಕುರ್ಚಿ ಖಾಲಿಯಾದಾಗ ಮಾತ್ರ ಅದರ ಪ್ರಶ್ನೆ ಬರುತ್ತದೆ. ಆದ್ದರಿಂದ ಸಿಎಂ ಕುರ್ಚಿ ಖಾಲಿ ಇಲ್ಲ. ನಾನು ಯಾವತ್ತು ಸಿದ್ದರಾಮಯ್ಯ ಅವರ ಪರವಾಗಿ ಇರುತ್ತೇನೆ ಎಂದು ಜಾರಿಕೊಂಡರು.