ಹೊಸದಿಗಂತ ವರದಿ, ಮೈಸೂರು:
ಜಿಲ್ಲೆಯ ಎಚ್.ಡಿ.ಕೋಟೆ ಪಟ್ಟಣದ ಚಾಕಹಳ್ಳಿ ಬಳಿ ಹುಲಿಯೊಂದು ಮೃತಪಟ್ಟಿರುವುದು ಶನಿವಾರ ಪತ್ತೆಯಾಗಿದೆ.
ಹುಲಿ ಸುಮಾರು ಒಂದುವರೆ ವರ್ಷದ ಮರಿ ಎಂದು ಅಂದಾಜಿಸಲಾಗಿದ್ದು, ಹುಲಿಯು ಮತ್ತೊಂದು ಹುಲಿಯೊಂದಿಗೆ ಕಾದಾಟದಲ್ಲಿ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ವೈದ್ಯಾಧಿಕಾರಿಗಳಾದ ಡಾ. ಮುಜಿಬ್ ಡಾ. ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೆಸರು ಹೇಳಲು ಇಚ್ಚಿಸದ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಪತ್ರಿಕೆಯೊಂದಿಗೆ ಮಾತನಾಡಿ ಹುಲಿ ಮತ್ತೊಂದು ಹುಲಿಯೊಂದಿಗೆ ಕಾಳಗವಾಗಿದ್ದು, ಕಾಳಗದಲ್ಲಿ ಮೃತಪಟ್ಟ ಹುಲಿಯನ್ನು, ಮರಿಗಳಾಗಿದ್ದರೆ ತಿನ್ನುತ್ತವೆ, ಹಾಗಾಗಿ ಹುಲಿ ಮೃತಪಟ್ಟ ಸ್ಥಳದಲ್ಲಿ ಸುತ್ತಲೂ ನಾಲ್ಕು ಕ್ಯಾಮರಾ ಗಳನ್ನು ಅಳವಡಿಸಲಾಗಿದ್ದು ನಾಳೆಯವರೆಗೂ ಪರಿಶೀಲನೆ ನಡೆಸಿ ನಂತರ ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ಮುಂದಿನ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.
ಕಳೆದ ಹಲವು ದಿನಗಳಿಂದ ಪಟ್ಟಣ ವ್ಯಾಪ್ತಿಯ ಹಾಗೂ ಅಕ್ಕಪಕ್ಕದ ಹಳ್ಳಿಗಳಲ್ಲಿ ಹುಲಿ ಮತ್ತು ಮರಿಹುಲಿಗಳು ನಿರಂತರವಾಗಿ ಓಡಾಡುತ್ತಿದ್ದುದು ರೈತರಿಗೆ ಕಾಣಿಸಿಕೊಂಡು ಭಯಭೀತಿಯನ್ನು ಉಂಟು ಮಾಡಿತ್ತು, ಈಗಾಗಲೇ ಪಟ್ಟಣ ವ್ಯಾಪ್ತಿಯಲ್ಲಿ ಮೃತಪಟ್ಟಿರುವುದು ಸಾರ್ವಜನಿಕರಲ್ಲಿ ಕುತೂಹಲ ಮತ್ತು ಆತಂಕ ಉಂಟುಮಾಡಿದೆ.
ಅರಣ್ಯ ಇಲಾಖೆಯ ಡಿಸಿಎಫ್ ಬಸವರಾಜು, ಎಸಿಎಫ್ ಅಭಿಷೇಕ್, ಆರ್ ಎಫ್ ಓ ಹನುಮಂತರಾಜು ಸ್ಥಳ ಪರಿಶೀಲನೆ ನಡೆಸಿದ್ದಾರೆ.