ಹೊಸದಿಗಂತ ವರದಿ, ಮೈಸೂರು:
ದಸರಾ ಪ್ರಯುಕ್ತ ಹೆಬ್ಬಾಳ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ಆಯೋಜಿಸಿದ್ದ ವಿಂಟೇಜ್ ಕಾರ್ ಶೋ ಮತ್ತು ರ್ಯಾಲಿಗೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
80 ರಿಂದ 100 ವರ್ಷಗಳಷ್ಟು ಹಳೆಯದಾದ ಮ್ಯಾರಿಸ್ ಮೈನರ್, ಅಸ್ಟಿನ್, ರೋಡ್ ಮಾಸ್ಟರ್, ರೋಲ್ಸ್ ರಾಯ್ಸ್ ಸೇರಿದಂತೆ ನಾನಾ ಮಾಡೆಲ್ ಕಾರುಗಳು ಮತ್ತು ಸ್ಕೂಟರ್ ಗಳ ವೀಕ್ಷಣೆ ಮಾಡಿದ ಸಚಿವರು, ವಿಂಟೇಜ್ ಕಾರಿನಲ್ಲಿ ಸಂಚರಿಸಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಇಷ್ಟೊಂದು ಬಗೆಬಗೆಯ ವಿಂಟೇಜ್ ಕಾರುಗಳನ್ನು ಹೊಂದಿರುವ ಉದ್ಯಮಿ ಗೋಪಿನಾಥ್ ಶೆಣೈ ಅವರಿಗೆ ಸರ್ಕಾರದ ಪರವಾಗಿ ಅಭಿನಂದನೆಗಳು. ಅಮೆರಿಕ, ಆಸ್ಟ್ರೇಲಿಯಾ, ಜರ್ಮನಿ ಸೇರಿದಂತೆ ನಾನಾ ದೇಶಗಳ ತರಹವೇರಿ ಕಾರುಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದೆ. 80, 100 ವರ್ಷಗಳ ಹಳೆಯ ಕಾರುಗಳ ನಿರ್ವಹಣೆ ಮಾಡುವುದು ಸುಲಭದ ಕೆಲಸವಲ್ಲ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ನಾಗೇಂದ್ರ, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೇ ಶ್ರೀನಿವಾಸ್, ಮುಡಾ ಮಾಜಿ ಅಧ್ಯಕ್ಷ ರಾಜೀವ್, ಜಂಗಲ್ಸ್ ಲಾಡ್ಜ್ಸ್ ಅಂಡ್ ರೆಸಾರ್ಟ್ಸ್ ಮಾಜಿ ಅಧ್ಯಕ್ಷ ಅಪ್ಪಣ್ಣ, ಬಿಜೆಪಿ ನಗರ ಜಿಲ್ಲಾಧ್ಯಕ್ಷರಾದ ಶ್ರೀವತ್ಸ ಸೇರಿದಂತೆ ಹಲವು ಮುಖಂಡರು ಜೊತೆಯಲ್ಲಿದ್ದರು.