ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ರಾಜ್ಯದಲ್ಲಿ ಮತ್ತೊಂದು ಬಲಿಯಾಗಿದೆ. ಮಹಿಳೆಯೊಬ್ಬರು ಸಿಬ್ಬಂದಿಯ ಕಾಟ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹಾಸನದ ಆಲೂರು ತಾಲೂಕಿನ, ಹಳ್ಳಿಯೂರು ಗ್ರಾಮದ ಕೆಂಚಮ್ಮ ಮೃತರು. ಕೆಂಚಮ್ಮ ಅವರ ಮನೆಗೆ ಮೈಕ್ರೋಫೈನಾನ್ಸ್ ಸಿಬ್ಬಂದಿ ಆಗಮಿಸಿದ್ದು, ಮನೆಯ ಬಾಗಿಲ ಬಳಿಯೇ ಕುಳಿತಿದ್ದಾರೆ. ಎಷ್ಟು ಹೇಳಿದರೂ ಎದ್ದು ಹೋಗಿಲ್ಲ. ಸಮಯ ನೀಡಿ ಎಂದರೂ ಕ್ಯಾರೆ ಎಂದಿಲ್ಲ ಎನ್ನಲಾಗಿದೆ.
ಬಿಎಸ್ಎಸ್, ಇಐಎಫ್ ಹೆಸರಿನ ಫೈನಾನ್ಸ್ ಕಂಪನಿಯಿಂದ ಕೆಂಚಮ್ಮ 2 ಲಕ್ಷ ರೂ. ಸಾಲ ಪಡೆದಿದ್ದರು. ಪ್ರತಿ ತಿಂಗಳು ಸರಿಯಾಗಿ ಕಂತಿನ ಹಣ ಕಟ್ಟುತ್ತಿದ್ದರು. ಈ ತಿಂಗಳು ಹಣ ಇಲ್ಲದ ಕಾರಣ ಕಟ್ಟಿರಲಿಲ್ಲ.ಇಂದೇ ಹಣ ಕಟ್ಟಬೇಕೆಂದು ಬಿಎಸ್ಎಸ್ ಮೈಕ್ರೋಫೈನಾನ್ಸ್ ಸಿಬ್ಬಂದಿ ಮನೆಯ ಬಳಿಯೇ ಬಂದು ಕುಳಿತಿದ್ದರು. ಇದರಿಂದ ಮನನೊಂದು ಮನೆಯಲ್ಲಿಯೇ ಕೆಂಚಮ್ಮ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಂಚಮ್ಮ ಸಾವಿನ ಸುದ್ದಿ ತಿಳಿದು ಮೈಕ್ರೋಫೈನಾನ್ಸ್ ಸಿಬ್ಬಂದಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.