ಹೊಸದಿಗಂತ ವರದಿ, ದಾವಣಗೆರೆ:
ಕ್ರೀಡಾಭ್ಯಾಸಕ್ಕೆ ಹೋಗಿದ್ದ ಕುಸ್ತಿಪಟು ವಿದ್ಯಾರ್ಥಿನಿಯೊಬ್ಬಳು ಗರಡಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಹರಿಹರ ನಗರದಲ್ಲಿ ನಡೆದಿದೆ.
ಕಾವ್ಯ ಪೂಜಾರ್(13 ವರ್ಷ) ಮೃತ ವಿದ್ಯಾರ್ಥಿನಿ. ಧಾರವಾಡ ಕುಸ್ತಿ ಹಾಸ್ಟೆಲ್ನಲ್ಲಿ ಅಭ್ಯಾಸ ಮಾಡುತ್ತಿರುವ ಕಾವ್ಯಾ ಕಳೆದ ಎರಡು ದಿನಗಳ ಹಿಂದಷ್ಟೇ ಹರಿಹರಕ್ಕೆ ಆಗಮಿಸಿದ್ದಳು. ಶಿಬಾರ ಸರ್ಕಲ್ನಲ್ಲಿರುವ ಗರಡಿಮನೆಗೆ ಕ್ರೀಡಾಭ್ಯಾಸಕ್ಕೆಂದು ಹೋದ ಸಂದರ್ಭದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಹರಿಹರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.