ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರದ ಯೋಜನೆಗಳ ಹಣ ಪಡೆಯಲು ಜನರು ಹರಸಾಹಸ ಪಡುತ್ತಾರೆ. ಇದರ ನಡುವೆ ಅನೇಕರು ಅಕ್ರಮವಾಗಿ ಕಬಳಿಸಲು ಯತ್ನಿಸುತ್ತಾರೆ.
ಇದೀಗ ಮಹಿಳೆಯೊಬ್ಬಳು ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆಯಡಿಯಲ್ಲಿ ನವ ಜೋಡಿಗಳಿಗೆ ನೀಡುವ ಲಕ್ಷ ರೂಪಾಯಿ ಹಣ ಪಡೆಯಲು ಐಡಿಯಾ ಮಾಡಿದ್ದಾಳೆ. ತನ್ನ ಸಹೋದರನ ಜೊತೆಗೆ ಅಧಿಕಾರಿಗಳ ಸಮ್ಮುಖದಲ್ಲಿ ಮದುವೆಯಾಗಿ ಹಣ ಪಡೆಯಲು ಯತ್ನಿಸಿದ್ದಾಳೆ.
ಈ ಘಟನೆ ಉತ್ತರ ಪ್ರದೇಶದ ಲಕ್ಷ್ಮಿಪುರ ಬ್ಲಾಕ್ನ ಮಹಾರಾಜ್ಗಂಜ್ನಲ್ಲಿ ನಡೆದಿದೆ.
ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆಯನ್ನು ಜಾರಿಗೆ ತರಲಾಗಿದೆ. ಆರ್ಥಿಕವಾಗಿ ಶಕ್ತಿ ಇಲ್ಲದವರು, ಬಡವರು ಈ ಸೌಲಭ್ಯದ ಮೂಲಕ ಗೌರವುಯತವಾಗಿ ಮದುವೆಯಾಗಲು ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಸಿಎಂ ಸಮೂಹಿಕ ವಿವಾಹ ಯೋಜನೆಯಲ್ಲಿ ಮದುವೆಯಾಗುವ ಜೋಡಿಗಳಿಗೆ ಮಂಗಳಸೂತ್ರ, ಸೀರೆ, ಧೋತಿ ಜೊತೆಗೆ ಒಂದಷ್ಟು ಉಡುಗೊರೆ ಹಾಗೂ ಲಕ್ಷ ರೂಪಾಯಿ ನಗದು ಹಣವನ್ನೂ ನೀಡಲಾಗುತ್ತದೆ.
ಹೀಗಾಗಿ ಮಹಾರಾಜ್ಗಂಜ್ ನಿವಾಸಿಯಾಗಿರವ ಈ ಮಹಿಳೆಗೆ ಈಗಾಗಲೇ ಮದುವೆಯಾಗಿದೆ. ಮಹಿಳೆ ಪತಿ ಲಖನೌದಲ್ಲಿನ ಮೆಟ್ರೋದಲ್ಲಿ ಸಿಬ್ಬಂದಿಯಾಗಿದ್ದಾರೆ. ರಜೆಯಲ್ಲಿ ಮಾತ್ರ ಊರಿಗೆ ಆಗಮಿಸುತ್ತಾರೆ. ಇತ್ತ ಸ್ಥಳೀಯ ಅಧಿಕಾರಿಗಳಿಗೆ ಹಣ ನೀಡಿ ದಾಖಲೆ ತಯಾರಿಸಿದ ಮಹಿಳೆ, ಸರ್ಕಾರಿ ಸಾಮೂಹಿಕ ಮದುವೆ ಯೋಜನೆಯಡಿ ಹೆಸರು ನೋಂದಾಯಿಸಿದ್ದಾಳೆ.
ಬಳಿಕ ತನ್ನ ಸಹೋದರನನ್ನೇ ಕರೆದುಕೊಂಡು ಅಧಿಕಾರಿಗಳ ಸಮ್ಮುಖದಲ್ಲಿ ಮದುವೆಯಾಗಿದ್ದಾಳೆ. ಮದುವೆಯಲ್ಲಿ ಸರ್ಕಾರದ ಕಡೆಯಿಂದ ಹಲವು ಉಡುಗೊರೆಗಳನ್ನು ನೀಡಲಾಗಿದೆ. ಮದುವೆಯಾದ ಒಂದು ವಾರದಲ್ಲಿ ಖಾತೆಗೆ ಯೋಜನೆಯ ಹಣ ಜಮೆಯಾಗಲಿದೆ. ಆದರೆ ಮದುವೆಯಾದ ಬೆನ್ನಲ್ಲೇ ಮಹಿಳೆಯ ನಾಟಕ ಬಯಲಾಗಿದೆ.
ಯೋಜನೆಯ ಹಣಕ್ಕಾಗಿ ಮದುವೆಯಾಗಿದ್ದಾರೆ ಅನ್ನೋ ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಅಷ್ಟರಲ್ಲೇ ಮದುವೆ ಮುಗಿದು ಹೋಗಿದೆ. ಇತ್ತ ಅಧಿಕಾರಿಗಳು ಈ ಜೋಡಿಗಳಿಗೆ ನೀಡಿದ ಉಡುಗೊರೆಗಳನ್ನು ವಾಪಸ್ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಈ ಮಹಿಳೆ ಹಣಕ್ಕಾಗಿ ಈ ರೀತಿ ಮಾಡಿರುವುದು ಪತ್ತೆಯಾಗಿದೆ. ತನಿಖೆ ಪೂರ್ಣಗೊಂಡ ಬಳಿಕ ಕಠಿಣ ಕ್ರಮಕೈಗೊಳ್ಳಲಾವುಗುದು ಎಂದು ಅಧಿಕಾರಿಗಳು ಹೇಳಿದ್ದಾರೆ.