ಹೊಸದಿಗಂತ ವರದಿ ಬೀದರ್:
ಆಮ್ ಆದ್ಮಿ ಪಾರ್ಟಿ(ಎಎಪಿ)ಯ ಜನ ಕಲ್ಯಾಣ ಯೋಜನೆಗಳ ಜಾಗೃತಿ ಮೂಡಿಸಲು ಪಕ್ಷದ ಕಾರ್ಯಕರ್ತರು ನಗರದಲ್ಲಿ ಕಾಲ್ನಡಿಗೆ ಜಾಥಾ ನಡೆಸಿದರು. ಅಂಬೇಡ್ಕರ್ ವೃತ್ತದಿಂದ ಜಾಥಾ ಆರಂಭಿಸಿ, ಶಿವಾಜಿ ವೃತ್ತ, ಹರಳಯ್ಯ ವೃತ್ತದ ಮಾರ್ಗವಾಗಿ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ನಗರಸಭೆ ಕಾಂಪ್ಲೆಕ್ಸ್ ಬಳಿ ಕೊನೆಗೊಳಿಸಿದರು.
ನಗರಸಭೆಯ ಕಾಂಪ್ಲೆಕ್ಸ್ನಲ್ಲಿ ಆಮ್ ಆದ್ಮಿ ಪಕ್ಷದ ಬೀದರ್ ನಗರ ಘಟಕದ ಕಚೇರಿಯನ್ನು ಜಿಲ್ಲಾ ಹೂಗಾರ ಸಮಾಜದ ಉಪಾಧ್ಯಕ್ಷ ಬಸವರಾಜ ಹೂಗಾರ ಉದ್ಘಾಟಿಸಿದರು. ಜಿಲ್ಲೆಯಲ್ಲಿ ಆಮ್ ಆದ್ಮಿ ಪಕ್ಷದ ಬಲವರ್ಧನೆಗೆ ಒತ್ತು ಕೊಡಲಾಗಿದೆ. ಈಗಾಗಲೇ ಜಿಲ್ಲಾ, ತಾಲ್ಲೂಕು ಘಟಕಗಳ ವಿವಿಧ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ಬರುವ ದಿನಗಳಲ್ಲಿ ಇನ್ನುಳಿದ ಪದಾಧಿಕಾರಿಗಳನ್ನು ಸಹ ನೇಮಕ ಮಾಡಲಾಗುವುದು ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ್ ಮಾಲಗಾರ್ ಹೇಳಿದರು. ಈ ಸಂದರ್ಭದಲ್ಲಿ ರಾಮಕುಮಾರ ಸೇರಿ ಹಲವರು ಪಕ್ಷಕ್ಕೆ ಸೇರ್ಪಡೆಯಾದರು. ಪಕ್ಷದ ಜಿಲ್ಲಾ ಘಟಕದ ಉಪಾಧ್ಯಕ್ಷ ಜಮೀಲ್ ಅಹಮ್ಮದ್ ಖಾದ್ರಿ, ನಗರಸಭೆ ಸದಸ್ಯ ಗುಲಾಂ ಅಲಿ, ಮುಖಂಡರಾದ ಗಂಧರ್ವ ಸೇನಾ, ಸಿದ್ದಪ್ಪ ಫುಲಾರಿ ಮತ್ತಿತರರು ಇದ್ದರು.