ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್ ಗಢದಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರು, ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಉಚಿತ ವಿದ್ಯುತ್, ಮಹಿಳೆಯರಿಗೆ ಮಾಸಿಕ ‘ಸಮ್ಮಾನ್ ರಾಶಿ’ ಮತ್ತು ನಿರುದ್ಯೋಗಿಗಳಿಗೆ ಮಾಸಿಕ 3,000 ರೂಪಾಯಿ ಸೇರಿದಂತೆ 10 ಗ್ಯಾರಂಟಿಗಳನ್ನು ಶನಿವಾರ ಘೋಷಿಸಿದ್ದಾರೆ.
ಶನಿವಾರ ರಾಯ್ಪುರದಲ್ಲಿ ಎಎಪಿ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ದೆಹಲಿ ಮತ್ತು ಪಂಜಾಬ್ ನಲ್ಲಿ ತಮ್ಮ ಪಕ್ಷದ ಸರ್ಕಾರಗಳು ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿವೆ. ಛತ್ತೀಸ್ ಗಢದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನೀಡಿದ ಭರವಸೆಗಳನ್ನು ಈಡೇರಿಸಲಾಗುವುದು ಎಂದರು.
ನೀಡಿದ ಭರವಸೆಗಳ ಈಡೇರಿಸುತ್ತೇವೆ
ಇದು ನಕಲಿ ಪ್ರಣಾಳಿಕೆ ಅಥವಾ ‘ಸಂಕಲ್ಪ ಪತ್ರ’ದಂತಲ್ಲ. ನೀಡಿದ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಕೇಜ್ರಿವಾಲ್ ಹೇಳಿದರು. ಆಪ್ ಅಧಿಕಾರಕ್ಕೆ ಬಂದರೆ, 24 ಗಂಟೆಗಳ ನಿರಂತರ ವಿದ್ಯುತ್ ನೀಡುತ್ತೇವೆ, ಪ್ರತಿ ಮನೆಗೆ 300 ಯೂನಿಟ್ ಗಳವರೆಗೆ ಉಚಿತ, ನವೆಂಬರ್ 2023 ರವರೆಗೆ ಬಾಕಿ ಉಳಿದಿರುವ ವಿದ್ಯುತ್ ಬಿಲ್ ಗಳ ಮನ್ನಾ, 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಮಹಿಳೆಯರಿಗೆ ಮಾಸಿಕ 1,000 ‘ಸಮ್ಮಾನ್ ರಾಶಿ'(ಗೌರವಧನ) ಮತ್ತು ಶಾಲಾ ಮಕ್ಕಳಿಗೆ ಉಚಿತ ಗುಣಮಟ್ಟದ ಶಿಕ್ಷಣ ನೀಡುತ್ತೇವೆ ಎಂದು ಕೇಜ್ರಿವಾಲ್ ಭರವಸೆ ನೀಡಿದ್ದಾರೆ.