ಹೊಸದಿಗಂತ ಡಿಜಿಟಲ್ ಡೆಸ್ಕ್
ಪಂಜಾಬ್ ನೂತನ ಮುಖ್ಯ ಮಂತ್ರಿಯಾಗಿ ಇಂದು ಆಮ್ ಆದ್ಮಿ ಪಕ್ಷದ ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಹುಟ್ಟೂರಾದ ಶಾಹಿದ್ ಭಗತ್ ಸಿಂಗ್ ಜಿಲ್ಲೆಯ ಖಟ್ಕರ್ ಕಲಾನ್ ಗ್ರಾಮದಲ್ಲಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನೆರವೇರಲಿದೆ.
ದೆಹಲಿ ಮುಖ್ಯಮಂತ್ರಿ, ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸೇರಿ ಪಕ್ಷದ ವಿವಿಧ ಪ್ರಮುಖ ಮುಖಂಡರು ಪಾಲ್ಗೊಳ್ಳುವರು. ಪಂಜಾಬ್ ಸಿಎಂ ಆಗಿ ನಾನೊಬ್ಬನೇ ಅಲ್ಲ, ರಾಜ್ಯದ 3 ಕೋಟಿ ಜನರು ನನ್ನೊಂದಿಗೆ ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ ಎಂದು ಭಗವಂತ್ ಮಾನ್ ಹೇಳಿದ್ದಾರೆ.
ಸಮಾರಂಭಕ್ಕೆ ಮಹಿಳೆಯರು ಹಳದಿ ಬಣ್ಣದ ದುಪ್ಪಟ್ಟಾ, ಪುರುಷರು ಹಳದಿ ಬಣ್ಣದ ಟರ್ಬನ್ (ಟೋಪಿ) ಧರಿಸಿ ಬರುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ. ಸಮಾರಂಭದಲ್ಲಿ ಸುಮಾರು 3 ಲಕ್ಷ ಜನರು ಭಾಗಿಯಾಗುವ ನಿರೀಕ್ಷೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 50ಎಕರೆ ಜಾಗದಲ್ಲಿಸಮಾರಂಭ ನಡೆಯಲಿದ್ದು, 10 ಸಾವಿರಕ್ಕೂ ಅಧಿಕ ರಕ್ಷಣಾ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಎಲ್ಲ ಶಾಲಾ-ಕಾಲೇಜುಗಳಿಗೂ ಜಿಲ್ಲಾಡಳಿತ ರಜೆ ನೀಡಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ