ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಪ್ ನಾಯಕಿ, ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ರಾಹುಲ್ ಗಾಂಧಿ ಸೇರಿದಂತೆ I.N.D.I.A ಒಕ್ಕೂಟದ ಪ್ರಮುಖ ನಾಯಕರಿಗೆ ಪತ್ರ ಬರೆದು ಭೇಟಿಗೆ ಸಮಯ ನೀಡುವಂತೆ ಮನವಿ ಮಾಡಿದ್ದಾರೆ.
ನಾನು ಕಳೆದ 18 ವರ್ಷಗಳಿಂದ ತಳಹಂತದಲ್ಲಿ ಜನರ ನಡುವೆ ಕೆಲಸ ಮಾಡಿದ್ದೇನೆ. ಕಳೆದ ಒಂಬತ್ತು ವರ್ಷಗಳಲ್ಲಿ ಮಹಿಳಾ ಆಯೋಗದಲ್ಲಿ 1.7 ಲಕ್ಷ ಪ್ರಕರಣಗಳನ್ನು ಆಲಿಸಿದ್ದೇನೆ. ಮಹಿಳಾ ಆಯೋಗವನ್ನು ಅತ್ಯಂತ ಉನ್ನತ ಸ್ಥಾನಕ್ಕೆ ಏರಿಸಿದೆ. ಮುಂದೆಯೂ ನಾನು ಯಾರಿಗೂ ಹೆದರುವುದಿಲ್ಲ, ಯಾರ ಮುಂದೆಯೂ ತಲೆಬಾಗುವುದಿಲ್ಲ ಎಂದಿದ್ದಾರೆ .
ನನಗೆ ಮುಖ್ಯಮಂತ್ರಿ ಕೇಜ್ರಿವಾಲ್ ಮನೆಯಲ್ಲಿ ಮೊದಲು ಕೆಟ್ಟದಾಗಿ ಥಳಿಸಲಾಯಿತು. ನಂತರ ನನ್ನ ಚಾರಿತ್ರ್ಯಹರಣ ಮಾಡಿರುವುದು ತುಂಬಾ ದುಃಖಕರವಾಗಿದೆ. ಇಂದು ನಾನು ಈ ವಿಷಯದ ಬಗ್ಗೆ ಮಾತನಾಡಲು I.N.D.I.A ಒಕ್ಕೂಟದ ಎಲ್ಲಾ ದೊಡ್ಡ ನಾಯಕರಿಗೆ ಪತ್ರ ಬರೆದಿದ್ದೇನೆ. ನಾನು ಎಲ್ಲರಿಗೂ ಭೇಟಿಗೆ ಸಮಯ ಕೇಳಿದ್ದೇನೆ ಎಂದು ಅವರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಪ್ತ ಸಹಾಯಕ ಬಿಭವ್ ಕುಮಾರ್ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದ ಸ್ವಾತಿ ಮಲಿವಾಲ್ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ಆರಂಭಿಸಿರುವ ದೆಹಲಿ ಪೊಲೀಸರು ಬಿಭವ್ ಕುಮಾರ್ ಬಂಧಿಸಿದ್ದು, ನ್ಯಾಯಂಗ ಬಂಧನಕ್ಕೆ ನೀಡಿದ್ದಾರೆ.