ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ನಡೆಯಲಿರುವ ರಾಮಲಲಾ ಪ್ರಾಣ ಪ್ರತಿಷ್ಠಾಪನೆಗೆ ಇಡೀ ದೇಶವೇ ಎದುರು ನೋಡುತ್ತಿದೆ. ರಾಮನ ದರುಶನದ ಆಹ್ವಾನಕ್ಕೆ ಸಾಕಷ್ಟು ಮಂದಿ ಕಾಯುತ್ತಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಅಧೀರ್ ರಂಜನ್ ಚೌಧರಿ ಪ್ರಾಣಪ್ರತಿಷ್ಠಾಪನೆಗೆ ಭಾಗವಹಿಸದೇ ಇರಲು ನಿರ್ಧರಿಸಿದ್ದಾರೆ. ಇವರ ನಿರ್ಧಾರ ಸರಿಯಾಗಿದೆ, ನಾನು ಇದನ್ನು ಬೆಂಬಲಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದು ಈ ವರ್ಷದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ, ಆದರೆ ಅದನ್ನು ಒಂದು ಪಕ್ಷದ ಕಾರ್ಯಕ್ರಮವನ್ನಾಗಿ ಮಾಡಲಾಗಿದೆ. ಇದು ಶ್ರೀರಾಮ ಹಾಗೂ ದೇಶದ ಜನರಿಗೆ ತೋರಿದ ಅಗೌರವ.
ತೀರ್ಪು ಬಂದಾಗಿನಿಂದಲೂ ರಾಮಮಂದಿರ ನಿರ್ಮಾಣಕ್ಕೆ ನಮ್ಮ ಬೆಂಬಲ ಇದೆ, ನಾವು ರಾಮನ ಭಕ್ತರೇ, ಮುಸ್ಲಿಂ ಸಮುದಾಯವರು ಕೂಡ ತೀರ್ಪನ್ನು ಒಪ್ಪಿದ್ದಾರೆ. ಎಲ್ಲರೂ ನ್ಯಾಯಕ್ಕೆ ತಲೆಬಾಗಿದ್ದೇವೆ. ಆದರೆ ಈ ಗೆಲುವನ್ನು ಒಂದು ಪಕ್ಷದ್ದು ಎಂದು ನಡೆದುಕೊಳ್ಳುತ್ತಿರುವುದು ಇಷ್ಟವಾಗಿಲ್ಲ. ಮುಂಬರುವ ಚುನಾವಣೆ ಗೆಲ್ಲಲು ಈ ರೀತಿ ಮಾಡುತ್ತಿದ್ದಾರೆ. ಅಪೂರ್ಣ ಸ್ಥಿತಿಯಲ್ಲಿರುವ ರಾಮಮಂದಿರವನ್ನು ಉದ್ಘಾಟಿಸಿ ಹಿಂದೂಗಳನ್ನು ಒಂದುಗೂಡಿಸಿ ಓಟು ಒತ್ತಿಸಿಕೊಳ್ಳುವ ಹುನ್ನಾರವಿದು ಎಂದು ಆರೋಪಿಸಿದ್ದಾರೆ.