ಹೊಸದಿಗಂತ ವರದಿ
ವಿಜಯಪುರ: ಜಿಲ್ಲಾ ನಿರ್ಮಿತಿ ಕೇಂದ್ರದ ಪ್ರೊಜೆಕ್ಟ್ ಮ್ಯಾನೇಜರ್ ನಿವಾಸದ ಮೇಲೆ ಬುಧವಾರ ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಜಿಲ್ಲಾ ನಿರ್ಮಿತಿ ಕೇಂದ್ರದ ಪ್ರೊಜೆಕ್ಟ್ ಮ್ಯಾನೇಜರ್ ಗೋಪಿನಾಥ ಸಾಮಲಜಿ ಅವರ ನಿವಾಸ, ಕಚೇರಿ, ಸ್ಟೋರ್ ಹಾಗೂ ಕಚೇರಿ ಸಿಬ್ಬಂದಿ ನಿವಾಸದ ಮೇಲೆ ದಾಳಿ ಮಾಡಲಾಗಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿರುವ ಗೋಪಿನಾಥ ಸಂಬಂಧಿಕರಿಗೆ ಸೇರಿದ ಎರಡು ಮನೆಗಳ ಮೇಲೆಯೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇದೀಗ ಎಸಿಬಿ ಅಧಿಕಾರಿಗಳ ತಂಡ ಅಧಿಕಾರಿಗಳ ತಂಡ ನಿರ್ಮಿತಿ ಕೇಂದ್ರದ ಕಚೇರಿ ಹಾಗೂ ಸ್ಟೋರ್ ನಲ್ಲಿ ದಾಖಲಾತಿಗಳನ್ನು ಪರಿಶೀಲನೆ ಮಾಡುತ್ತಿದ್ದು, ಜೊತೆಗೆ ನಗರದ ಸೊಲ್ಲಾಪುರ ರಸ್ತೆಯಲ್ಲಿರುವ ಗೋಪಿನಾಥ ಸಾಮಲಜಿ ನಿವಾಸ, ದರ್ಗಾ ಪ್ರದೇಶದಲ್ಲಿರುವ ಕಚೇರಿ ಹಾಗೂ ಸ್ಟೋರ್ ನಲ್ಲಿಯೂ ದಾಖಲಾತಿ ಪರಿಶೀಲನೆ ಕಾರ್ಯ ಮುಂದುವರೆದಿದೆ. ನಗರದ ರಾಮದೇವ ನಗರದಲ್ಲಿರುವ ನಿರ್ಮಿತಿ ಕೇದ್ರದ ಅಕೌಟೆಂಟ್ ಮಲ್ಲಮ್ಮ ನಿವಾಸದ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲಾತಿಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಕೊಪ್ಪಳದಲ್ಲೂ ದಾಳಿ:
ಕೊಪ್ಪಳ ನಗರದಲ್ಲಿಯೂ ಸಹ ಇಂದು ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಯಲಬುರ್ಗಾದ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸಹಾಯಕ ಇಂಜನೀಯರ್ ಗಿರೀಶ ಅವರ ಮನೆ ಮೇಲೆ ದಾಳಿ ನಡೆದಿದೆ. ಕೊಪ್ಪಳದ ಕುಷ್ಟಗಿ ರಸ್ತೆ ಸಮೀಪದ ಅಗಡಿ ಲೇಔಟ್ ನಲ್ಲಿರುವ ಗಿರೀಶ್ ಮನೆ ಮೇಲೆ ದಾಳಿ ನಡೆದಿದ್ದು, ಪರಿಶೀಲನೆ ನಡೆಸಲಾಗುತ್ತಿದೆ.
ರಾಮನಗರ:
ರಾಮನಗರದಲ್ಲೂ ಎಸಿಬಿ ದಾಳಿ ನಡೆದಿದೆ. ರಾಮನಗರದ ಎ. ಸಿ ಕಛೇರಿ ಮೇಲೆ ಎಸಿಬಿ ಡಿವೈಎಸ್ಪಿ ಮಂಜುನಾಥ ಗಂಗಲ್ ಹಾಗೂ ತಂಡದವರು ದಾಳಿ ನಡೆಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ರಾಮನಗರ ಉಪವಿಭಾಗಾಧಿಕಾರಿ ಮಂಜುನಾಥ್ ಅವರ ಕಛೇರಿ ಮೇಲೆ ಎಸಿಬಿ ದಾಳಿ ನಡೆಸಿದ್ದಾರೆ. ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಕಛೇರಿ ಬಳಿ ಬಂದ ಅಧಿಕಾರಿಗಳು ಸಚ್೯ ವಾರೆಂಟ್ ನೀಡಿ ಕಛೇರಿಯಲ್ಲಿ ತಪಾಸಣೆ ಕಾರ್ಯ ನಡೆಸುತ್ತಿದ್ದಾರೆ.