ಹೊಸದಿಗಂತ ವರದಿ, ಕಲಬುರಗಿ:
ಜಿಲ್ಲೆಯ ಆರಾಧ್ಯ ದೈವ ಶ್ರೀ ಶರಣಬಸವೇಶ್ವರರ 202ನೇ ಜಾತ್ರಾ ಮಹೋತ್ಸವದ ಮುನ್ನಾ ದಿನ ನಡೆಯುವ ಉಚ್ಚಾಯಿ ರಥೋತ್ಸವದಲ್ಲಿ ಅವಘಡ ಸಂಭವಿಸಿದೆ.
ಶುಕ್ರವಾರ ನಗರದ ಶರಣಬಸವೇಶ್ವರರ ದೇವಸ್ಥಾನ ಆವರಣದಲ್ಲಿ ನಡೆದ ಉಚ್ಚಾಯಿ ರಥೋತ್ಸವದ ಬಂದೋಬಸ್ತ್ ಕಾರ್ಯ ನಿರ್ವಹಿಸುತ್ತಿದ್ದ ಹೋಮ್ ಗಾರ್ಡ್ ರಾಮು ತಂದೆ ಸಿದ್ದಪ್ಪ ವಾಲಿ (28) ಉಚ್ಚಾಯಿ ರಥದ ಚಕ್ರಕ್ಕೆ ಸಿಲುಕಿ ಸಾವನ್ನೊಪ್ಪಿರುವ ಘಟನೆ ನಡೆದಿದೆ.
ಚಿಟಗುಪ್ಪಾ ಘಟಕದ ಗೃಹರಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಮು ಬೀದರ್ ಜಿಲ್ಲೆಯ ಇಟಗಾ ಗ್ರಾಮದವರು. ಶುಕ್ರವಾರ ಶ್ರೀ ಶರಣಬಸವೇಶ್ವರರ ಉಚ್ಚಾಯಿ ತೇರು ಎಳೆಯುವ ವೇಳೆ ಉಂಟಾದ ಗದ್ದಲದಲ್ಲಿ ಭಕ್ತರನ್ನ ನಿಯಂತ್ರಿಸುವ ಸಂದರ್ಭದಲ್ಲಿ ತೇರಿನ ಕೆಳಗೆ ಬಿದ್ದು ಕರ್ತವ್ಯದಲ್ಲಿದ್ದಾಗ ಸಾವನ್ನಪ್ಪಿದ್ದಾರೆ.
ಇನ್ನೊರ್ವ ಹೋಮ್ ಗಾರ್ಡ್ ಅಶೋಕ್ ರೆಡ್ಡಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಬೆಳೆ ಓರ್ವ ಬಾಲಕನ ಕಾಲಿಗೂ ಗಾಯವಾಗಿದೆ. ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಆರ್ಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.