ಹೊಸದಿಗಂತ ವರದಿ ಬೇಲೂರು:
ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಗಂಗಯ್ಯ ಎಂಬುವವರ ಮನೆ ಸಂಪೂರ್ಣ ಭಸ್ಮವಾದ ಘಟನೆ ಬೇಲೂರು ತಾಲ್ಲೂಕಿನ ಅಜ್ಜೇನಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
ಘಟನೆಯಲ್ಲಿ ಮನೆಯಲ್ಲಿದ್ದ ನಾಲ್ವರು ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದು, ಬೆಂಕಿಯ ರಭಸಕ್ಕೆ ಎಲ್ಲ ವಸ್ತುಗಳು ಸುಟ್ಟುಹೋಗಿದ್ದು, ಎರಡು ಜಾನುವಾರುಗಳು ಗಂಭೀರವಾಗಿ ಗಾಯಗೊಂಡಿವೆ. ಈ ದುರ್ಘಟನೆಯ ಕಾರಣ ಮತ್ತು ಒಟ್ಟಾರೆ ನಷ್ಟದ ಮೌಲ್ಯ ಅಂದಾಜಿಸಲು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದು, ಸ್ಥಳೀಯರ ಸಹಕಾರದಿಂದ ಬೆಂಕಿ ನಿಯಂತ್ರಣಕ್ಕೆ ತಂದು ಹೆಚ್ಚಿನ ಅನಾಹುತವನ್ನು ತಪ್ಪಿಸಿದೆ.
ಘಟನಾ ಸ್ಥಳಕ್ಕೆ ಬೇಲೂರು ತಹಶಿಲ್ದಾರ್ ಎಂ. ಮಮತಾ ಭೇಟಿ ನೀಡಿದ್ದು, ಈ ಅವಘಡ ತುಂಬಾ ನೋವು ತಂದಿದೆ. ಶೀಘ್ರವೇ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಗ್ರಾಮ ಪಂಚಾಯಿತಿಯಿಂದ ತಾತ್ಕಾಲಿಕ ವ್ಯವಸ್ಥೆ ಮಾಡಿಸಿಕೊಡಲಾಗುವುದು. ಹಸುಗಳಿಗೆ ಹಾನಿಯಾಗಿದ್ದು ಮೇಲಾಧಿಕಾರಿಗಳಿಗೆ ವರದಿ ನೀಡಿ ಪರಿಹಾರಕ್ಕೆ ಕ್ರಮ ವಹಿಸಲಾಗುವುದು.
ಗಂಗಯ್ಯನವರ ಮಗಳು ಪಿಯುಸಿ ವಿದ್ಯಾರ್ಥಿನಿಯಾಗಿದ್ದು ಬೆಂಕಿಯ ರಭಸಕ್ಕೆ ಪರೀಕ್ಷಾ ಪ್ರವೇಶ ಪತ್ರ ಸುಟ್ಟು ಹೋಗಿದ್ದು. ಪರೀಕ್ಷೆಗೆ ತೊಂದರೆಯಾಗದಂತೆ ನೋಟ್ಸ್ ಮತ್ತು ಪುಸ್ತಕಗಳನ್ನು ಒದಗಿಸಲಾಗುವುದು ಎಂದು ಹೇಳಿದರು.