ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನ ಚಿತ್ರಕ್ಕೆ ಬಂಡವಾಳ ಹೂಡಿದ ನಿರ್ಮಾಪಕನ ವಿರುದ್ಧವೇ ನಟ ಹಾಗೂ ನಿರ್ದೇಶಕ ರೂಪೇಶ್ ರಾಜ್, ವಂಚನೆ ಆರೋಪದಡಿ ದೂರು ದಾಖಲಿಸಿರುವ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಧೂಳೀಪಟ ಹಾಗೂ ಸಾರಿ ಕಣೇ ಎಂಬ ಎರಡು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ಗಿರೀಶ್ ವಿರುದ್ಧ ನಟ ರೂಪೇಶ್ ದೂರು ನೀಡಿದ್ದಾರೆ. ಹಣ ವಾಪಸ್ ಕೇಳಿದರೆ ಚಾಕುವಿನಿಂದ ಚುಚ್ಚಿ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ನಿರ್ಮಾಣ ಮಾಡಿರುವ ಎರಡೂ ಚಿತ್ರಗಳು ಹೀನಾಯ ಸೋಲು ಅನುಭಿವಿಸಿದ್ದರಿಂದ ನಿರ್ಮಾಪಕ ಗಿರೀಶ್ ಹಣ ಕಳೆದುಕೊಂಡಿದ್ದಾರಂತೆ. ಚಿತ್ರೀಕರಣದ ಸಮಯದಲ್ಲಿ ಹಣವಿಲ್ಲ ಎಂದು ಹೇಳಿ ನಟ ರೂಪೇಶ್ ರಾಜ್ ಬಳಿ ಕೇಳಿದ್ದರಂತೆ. ಈ ಹಿನ್ನಲೆ ರೂಪೇಶ್ 33 ಲಕ್ಷ ರೂ. ಹಣ ನೀಡಿದ್ದರು ಎನ್ನಲಾಗಿದೆ. ಅಲ್ಲದೆ ರೂಪೇಶ್ ನೀಡಿದ ಜಾಮೀನಿನ ಮೇಲೆ ಬಾಗಲಕೋಟೆಯ ಶಿರಗಣ್ಣನವರ್ ಎಂಬಾತನಿಂದ 40 ಲಕ್ಷ ಹಾಗೂ ಬಿ.ವಿ. ಲೋಕೇಶ್ ಎಂಬುವವರ ಬಳಿ 60 ಲಕ್ಷ ರೂ. ಸಾಲ ಪಡೆದಿದ್ದಾರೆ ಎಂದು ರೂಪೇಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದೀಗ ಹಣ ವಾಪಸ್ ಕೇಳಿದರೆ ಗಿರೀಶ್ ಮತ್ತು ಆತನ ಗ್ಯಾಂಗ್ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಗಿರೀಶ್ ಹಣ ನೀಡಿಯೇ ಇಲ್ಲ ಎಂದು ಬರೆದುಕೊಡು ಎಂದು ಒತ್ತಾಯ ಮಾಡುತ್ತಿದ್ದಾರೆ ಎಂದು ರೂಪೇಶ್ ಆರೋಪಿಸಿದ್ದಾರೆ.
ರೂಪೇಶ್ ದೂರಿನ ಹಿನ್ನೆಲೆಯಲ್ಲಿ ನಿರ್ಮಾಪಕ ಗಿರೀಶ್, ಅಂಜುಂ, ವಿಕೆ ಮೂರ್ತಿ ಹಾಗೂ ಮೋಹನ್ ಎಂಬುವವರ ಮೇಲೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.