ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾಯಿ ಅಗಲಿಕೆಯ ನೋವಿನ ನಡುವೆಯೇ ನಟ ವಿನೋದ್ ರಾಜ್ ಇಂದು ಹಾಲು ತುಪ್ಪ ಬಿಡುವ ಶಾಸ್ತ್ರವನ್ನ ನೆರವೇರಿಸಿದ್ದಾರೆ.
ಹಿರಿಯ ನಟಿ ಲೀಲಾವತಿ ನಮ್ಮನ್ನೆಲ್ಲಾ ಅಗಲಿ ಇಂದಿಗೆ ಮೂರನೇ ದಿನವಾಗಿದ್ದು, ಹಾಲುತುಪ್ಪ ಕಾರ್ಯವನ್ನ ಇಂದು ಕುಟುಂಬಸ್ಥರು ನೆರವೇರಿಸಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಲೀಲಾವತಿ ಡಿ.8ರಂದು ಸಂಜೆ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ನಿನ್ನೆ ನೆಲಮಂಗಲದ ಸೋಲದೇವನಹಳ್ಳಿಯ ತಮ್ಮ ನೆಚ್ಚಿನ ಕನಸಿನ ತೋಟದ ಮನೆಯ ತೋಟದಲ್ಲಿ ಹಿಂದೂ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನಡೆದಿತ್ತು.
ಮೂರನೇ ದಿನದ ಹಾಲು ತುಪ್ಪ ಕಾರ್ಯವನ್ನ ಇಂದು ಮದ್ಯಾಹ್ನ ಕುಟುಂಬದ ಸದಸ್ಯರು, ಅಪ್ತರು, ಮತ್ತು ಸೋಲದೇವನಹಳ್ಳಿಯ ಸುತ್ತಮುತ್ತಲಿನ ಜನರು ಸೇರಿ ಮಾಡಿದ್ದಾರೆ. ಅಗಲಿದ ತಾಯಿಗೆ ಮಗ ವಿನೋದ್ ರಾಜ್ ಭಾರವಾದ ಹೃದಯದಲ್ಲೇ ಹಾಲು ತುಪ್ಪ ಹಾಕಿ ತಾಯಿಯ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಕೇಳಿಕೊಂಡರು. ಲೀಲಾವತಿಯ (Leelavathi) ಸೊಸೆ ಅನು, ಮತ್ತು ಮೊಮ್ಮಗ ಯುವರಾಜ್ (Yuvaraj) ಕೂಡ ಲೀಲಾವತಿಯ ಸಮಾಧಿಗೆ ಪೂಜೆ ಮಾಡಿ ಹಾಲುತುಪ್ಪ ಕಾರ್ಯ ಮಾಡಿದ್ದರು.