ಹೊಸದಿಗಂತ ವರದಿ ಬನವಾಸಿ:
ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರುಗಳಾದ ಶ್ರೀ ಪ್ರಸನ್ನ ರೇಣುಕ ಡಾ. ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ “ಅಡ್ಡಪಲ್ಲಕ್ಕಿ ಉತ್ಸವ” ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ-ಸಂಭ್ರಮಗಳಿಂದ ನೆರವೇರಿತು.
ಇಲ್ಲಿಯ ಬಯಲು ಬಸವೇಶ್ವರ ದೇವಸ್ಥಾನದಿಂದ ಶ್ರೀ ಮಧುಕೇಶ್ವರ ದೇವಸ್ಥಾನದವರೆಗೆ ಸಂಚರಿಸಿದ “ಅಡ್ಡಪಲ್ಲಕ್ಕಿ ಉತ್ಸವ”ಕ್ಕೆ ಭಕ್ತರು ಶಿರಸಾಷ್ಟಾಂಗ ಪ್ರಣಾಮಗಳನ್ನು ಅರ್ಪಿಸುತ್ತಾ, ಜಗದ್ಗುರುಗಳ ಆಶೀರ್ವಾದ ಪಡೆದುಕೊಂಡರು.
ಇದೇ ಮೊದಲ ಬಾರಿಗೆ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ವೀರಗಂಗಾಧರ ರಾಜ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಆಗಮಿಸಿ ಭಕ್ತರನ್ನು ಹರಸಿದ್ದು ವಿಶೇಷವಾಗಿತ್ತು. ಬನವಾಸಿ ಹೊಳೆಮಠದ ಮ.ನಿ.ಪ್ರ ನಾಗಭೂಷಣ ಸ್ವಾಮಿಜೀ “ಅಡ್ಡಪಲ್ಲಕ್ಕಿ ಉತ್ಸವ”ದ ನೇತೃತ್ವ ವಹಿಸಿದ್ದರು. ನಾಡಿನ ವಿವಿಧ ಮಠಗಳ ಮಠಾಧೀಶರು ಪಾಲ್ಗೊಂಡಿದ್ದರು. “ಅಡ್ಡಪಲ್ಲಕ್ಕಿ ಉತ್ಸವ” ವೇಳೆ ವಿವಿಧ ವಾದ್ಯ ಮೇಳ, ಚಂಡೆ, ಮಹಿಳೆಯರ ಪೂರ್ಣಕುಂಭ ಮೆರವಣಿಗೆಯು ಗಮನಸೆಳೆಯಿತು.
ಬನವಾಸಿ ಹಾಗೂ ಸುತ್ತ-ಮುತ್ತಲಿನ ಅನೇಕ ಗ್ರಾಮಗಳ ಸಹಸ್ರಾರು ಭಕ್ತರು ಭಾಗವಹಿಸಿದ್ದರು.