ಹೊಸದಿಗಂತ ವರದಿ ಶಿರಸಿ
ರಾಜ್ಯದ ಅತಿದೊಡ್ಡ ಜಾತ್ರೆ ಎಂದೇ ಪ್ರಸಿದ್ದಿ ಪಡೆದ ಶಿರಸಿ ಮಾರಿಕಾಂಬಾ ದೇವಿಯ ಜಾತ್ರೆಯ ರಥೋತ್ಸವ ವೈಭವಯುತವಾಗಿ ಬುಧವಾರ ನಡೆಯಿತು. ಲಕ್ಷಾಂತರ ಜನ ಭಕ್ತ ಸಮೂಹದ ಈ ರಥೋತ್ಸವಕ್ಕೆ ಸಾಕ್ಷಿಯಾಗುವ ಮೂಲಕ ದೇವಿ ಮಾರಿಕಾಂಬೆಯ ದರ್ಶನ ಪಡೆದು ಕೃತಾರ್ಥರಾದರು.
ಬೆಳಗ್ಗೆ ೭ ಗಂಟೆಯಿಂದ ಆರಂಭಗೊಂಡ ರಥೋತ್ಸವದ ಧಾರ್ಮಿಕ ವಿಧಿ ವಿಧಾನಗಳು ಶ್ರೀ ದೇವಿ ಮಾರಿಕಾಂಬೆ ಜಾತ್ರಾ ಗದ್ದುಗೆಗೆ ಬಂದು ಪ್ರತಿಷ್ಠಾಪಿಸಸುವ ಮೂಲಕ ಕೊನೆಗೊಂಡಿತು. ಇದಕ್ಕೂ ಮುನ್ನ ಮಾರಿಕಾಂಬಾ ದೇವಾಲಯದ ಎದುರು ಸರ್ವಾಲಂಕಾರ ಭೂಷಿತ ಶ್ರೀ ಮಾರಿಕಾಂಬಾ ದೇವಿಯನ್ನು ಅಲಂಕೃತ ರಥದಲ್ಲಿ ಜಾತ್ರಾ ಗದ್ದುಗೆಯತ್ತ ಕರೆದೊಯ್ಯುವ ವಿಧಿ ವಿಧಾನಗಳು ವಿಧ್ಯುಕ್ತವಾಗಿ ಪರಂಪರೆಯಂತೆ ನಡೆದವು.
ದೇವಿ ರಥಾರೂಢವಾಗುತ್ತಿದ್ದಂತೆಯೇ ನೆರೆದ ಲಕ್ಷಾಂತರ ಭಕ್ತರು ಉಘೇ ಉಘೇ ಎನ್ನುವ ಜಯಘೋಷ ಮೊಳಗಿತು. ವಾದ್ಯ, ಡೊಳ್ಳುಕುಣಿತ, ಜಾನಪದ ಕಲೆಯೊಂದಿಗೆ ಅದ್ಧೂರಿಯಾಗಿ ರಥೋತ್ಸವದ ಶೋಭಾಯಾತ್ರೆ ಗಮನ ಸೆಳೆಯಿತು. ಮಾರಿ ದೇವಿಯಯನ್ನು ಜಾತ್ರಾ ಚಪ್ಪರಕ್ಕೆ ಕರೆತರಲು ಲಕ್ಷಾಂತರ ಭಕ್ತ ಸಮೂಹ ಸಾಕ್ಷಿಯಾಯಿತು. ಮೆರವಣಿಗೆಯುದ್ದಕ್ಕೂ ಭಕ್ತರಿಂದ ಮಾರಿಕಾಂಬೆಯ ಉದ್ಘಾರ ಘೋಷಣೆ ಮೊಳಗಿತು.
ಶಕ್ತಿ ದೇವತೆ ಶಿರಸಿಯ ಮಾರಿಕಾಂಬೆ ದೇವಿಯ ಜಾತ್ರೆ ನೂರಾರು ವರ್ಷದ ಇತಿಹಾಸ ಹೊಂದಿದ್ದು, ಲಕ್ಷಾಂತರ ಭಕ್ತ ಸಮೂಹದೊಂದಿಗೆ ಜಾತ್ರಾ ಗದ್ದುಗೆಗೆ ಮಾರಿಕಾಂಬಾ ದೇವಿ ವಿರಾಜಮಾನಳಾದಳು.