ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿಕೂಲ ಹವಾಂಆಣದ ಹಿನ್ನೆಲೆಯಲ್ಲಿ ಆಗಸ್ಟ್ 5ರ ಮೊದಲು ಅಮರನಾಥ ದೇಗುಲಕ್ಕೆ ಭೇಟಿ ನೀಡುವಂತೆ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮತ್ತು ಶ್ರೀ ಅಮರನಾಥ ಜಿ ಶ್ರೈನ್ ಬೋರ್ಡ್ (ಎಸ್ಎಎಸ್ಬಿ) ಅಧ್ಯಕ್ಷ ಮನೋಜ್ ಸಿನ್ಹಾ ಅವರು ಭಕ್ತರಲ್ಲಿ ಮನವಿ ಮಾಡಿದ್ದಾರೆ.
“ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಆಗಸ್ಟ್ 5 ರ ಮೊದಲು ಅಮರನಾಥ ದೇಗುಲಕ್ಕೆ ಭೇಟಿ ನೀಡುವಂತೆ ನಾನು ಎಲ್ಲ ಭಕ್ತರನ್ನು ಕೋರುತ್ತೇನೆ, ಅದರ ನಂತರ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದೆ” ಎಂದು ಸಿನ್ಹಾ ಉಲ್ಲೇಖಿಸಿದ್ದಾರೆ. ಆಗಸ್ಟ್ 5 ರಿಂದ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಮತ್ತು ಇದು ಯಾತ್ರಾರ್ಥಿಗಳಿಗೆ ಅನಾನುಕೂಲತೆಯನ್ನು ಉಂಟುಮಾಡಬಹುದು ಎಂದು ಸಿನ್ಹಾ ಹೇಳಿದ್ದಾರೆ.
ಜುಲೈನಲ್ಲಿ ಮೇಘಸ್ಫೋಟದಿಂದಾಗಿ ಕೆಲಕಾಲ ಸ್ಥಗಿತಗೊಂಡಿದ್ದ ಯಾತ್ರೆಯನ್ನು ಮತ್ತೆ ಪ್ರಾರಂಭಿಸಲಾಗಿತ್ತು. ಜೂನ್ 29 ರಂದು ಆರಂಭವಾದ ಅಮರನಾಥ ಯಾತ್ರೆಯು ರಕ್ಷಾ ಬಂಧನದ ಸಂದರ್ಭದಲ್ಲಿ ಆಗಸ್ಟ್ 11 ರಂದು ಅಧಿಕೃತವಾಗಿ ಮುಕ್ತಾಯಗೊಳ್ಳಲಿದೆ.