ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾರ್ವಜನಿಕ ಸ್ಥಳ, ಧಾರ್ಮಿಕ ಸ್ಥಳಗಳ ಬಳಿ ಮತ್ತು ದೂರದರ್ಶನದಲ್ಲಿ ಮಾಂಸಾಹಾರಿ ಆಹಾರದ ಜಾಹೀರಾತುಗಳ ಮೇಲೆ ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಬಾಂಬೆ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಮುಂಬೈನ ಮೂರು ಜೈನ ಸಮುದಾಯಗಳಾದ ಜೈನ್ ಸಮುದಾಯದ ಶ್ರೀ ಟ್ರಸ್ಟಿ ಆತ್ಮ ಕಮಲ ಲಬ್ಧಿಸುರಿಶ್ವರ್ಜಿ ಜೈನ್ ಜ್ಞಾನಮಂದಿರ ಟ್ರಸ್ಟ್, ಸೇಠ್ ಮೋತಿಶಾ ಚಾರಿಟಬಲ್ ಟ್ರಸ್ಟ್ ಮತ್ತು ಶ್ರೀ ವರ್ಧಮಾನ್ ಪರಿವಾರದ ಕಾರ್ಯಕರ್ತ ಜ್ಯೋತಿಂದ್ರ ಶಾ ಅವರು ಪಿಐಎಲ್ ಸಲ್ಲಿಸಿದ್ದರು. ಅದರಲ್ಲಿ ಮಾಂಸಾಹಾರದ ಜಾಹೀರಾತುಗಳು ಜೈನರ ಶಾಂತಿಯಿಂದ ಬದುಕುವ ಮತ್ತು ಮೂಲ ಹಕ್ಕನ್ನು ಹಾಳುಮಾಡುತ್ತದೆ ಎಂದು ಹೇಳಿದ್ದರು.
ಪಿಐಎಲ್ಗೆ ಪ್ರತಿಕ್ರಿಯೆಯಾಗಿ ನ್ಯಾಯಾಲಯವು ಮನವಿಯನ್ನು ತಿರಸ್ಕರಿಸಿ, ‘ಟಿವಿಯಲ್ಲಿನ ಜಾಹೀರಾತುಗಳಿಂದ ನಿಮಗೆ ತೊಂದರೆಯಾಗಿದ್ದರೆ ಅದನ್ನು ಆಫ್ ಮಾಡಿ. ಜಾಹೀರಾತು ಉದ್ಯಮವು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಅದನ್ನು ತಡೆಯಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟಿದೆ. ಹಾಗೇ ಮತ್ತೆ ಅರ್ಜಿ ಸಲ್ಲಿಸಲು ನ್ಯಾಯಾಲಯ ಅನುಮತಿ ನೀಡಿದೆ.