ಹೊಸದಿಗಂತ ಡಿಜಿಟಲ್ ಡೆಸ್ಕ್ :
ಸಿನಿಮಾ ಇಂದು ಜನರಿಗೆ ಮನರಂಜನೆ ಜೊತೆಗೆ ಅನೇಕ ಅಂಶಗಳನ್ನು ತಿಳಿಸುತ್ತೆ. ಜನರು ಸಿನಿಮಾನವನ್ನು ಸಿನಿಮಾ ರೀತಿಯಲ್ಲೇ ನೋಡಿ ಎಂಜಾಯ್ ಮಾಡಬೇಕು. ಆದರೆ ಕೆಲವೊಂದಿಷ್ಟು ವೀಕ್ಷಕರು ಸಿನಿಮಾಗಳನ್ನು ನೋಡಿ ಅದರಿಂದ ಪ್ರೇರಿತರಾಗಿ ಹೀರೋ ಆಗೋಕೆ ಹೊರಟು ಬಿಡ್ತಾರೆ. ಜೊತೆಗೆ ಸಿನಿಮಾದಲ್ಲಿ ಹೀರೋ ಮಾಡಿದ ಕೆಲಸವನ್ನೇ ಮಾಡೋದಕ್ಕೆ ಮುಂದಾಗುತ್ತಾರೆ.
ಅದೇ ರೀತಿ ಘಟನೆ ಈಗ ನಡೆದಿದ್ದು, ನಟ ದುಲ್ಕರ್ ಸಲ್ಮಾನ್ ಅಭಿನಯದ ಲಕ್ಕಿ ಭಾಸ್ಕರ್ ಸಿನಿಮಾ ನೋಡಿ 9ನೇ ತರಗತಿಯ ವಿದ್ಯಾರ್ಥಿಗಳು ನಾವು ಆ ಹೀರೋ ರೀತಿಯಲ್ಲೇ ದುಡ್ಡು ಮಾಡೋಕೆ ಹೋಗ್ತೀವಿ ಅಂತ ಹಾಸ್ಟೆಲ್ನಿಂದ ಎಸ್ಕೇಪ್ ಆಗಿದ್ದಾರೆ.
4 ವಿದ್ಯಾರ್ಥಿಗಳು ಗೇಟ್ ಹಾರಿ ಎಸ್ಕೇಪ್ ಆಗಿರೋ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೇ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಚಿತ್ರದಲ್ಲಿ ನಾಯಕನಟ ತನ್ನ ಕಠಿಣ ಪರಿಶ್ರಮ ಮತ್ತು ಬುದ್ಧಿವಂತಿಕೆಯ ಮೂಲಕ ದಿಢೀರ್ ಕೋಟ್ಯಾಧಿಪತಿಯಾಗುತ್ತಾನೆ. ಈ ಚಿತ್ರದಿಂದ ಪ್ರೇರಿತರಾದ ನಾಲ್ವರು ಶಾಲಾ ವಿದ್ಯಾರ್ಥಿಗಳು ನಾಪತ್ತೆಯಾಗಿರುವ ವಿಚಿತ್ರ ಹಾಗೂ ಆಘಾತಕಾರಿ ಘಟನೆ ವಿಶಾಖಪಟ್ಟಣಂನಲ್ಲಿ ನಡೆದಿದೆ.
ಶಾಲಾ ಮಕ್ಕಳ ಗುಂಪೊಂದು ಸ್ಟಾರ್ ನಟ ದುಲ್ಕರ್ ಸಲ್ಮಾನ್ ಅಭಿನಯದ ‘ಲಕ್ಕಿ ಬಾಸ್ಕರ್’ ಸಿನಿಮಾ ಸಂದೇಶವನ್ನು ಮನಸ್ಸಿಗೆ ತೆಗೆದುಕೊಂಡಿದ್ದಾರೆ. ದುಲ್ಕರ್ ಸಲ್ಮಾನ್ ಅಂದ್ರೆ ಬಾಸ್ಕರ್ ಹೇಗೆ ಹಣ ಸಂಪಾದನೇ ಮಾಡ್ತಾರೋ ಅದೇ ರೀತಿ ದುಡ್ಡು ಸಂಪಾದಿಸಲು ಸ್ಫೂರ್ತಿ ಪಡೆದು ವಿಶಾಖಪಟ್ಟಣಂನಲ್ಲಿರುವ ಸೇಂಟ್ ಆನ್ಸ್ ಹೈಸ್ಕೂಲ್ನ 9ನೇ ತರಗತಿಯ ವಿದ್ಯಾರ್ಥಿಗಳು ಸೋಮವಾರ ಮುಂಜಾನೆ 6.20ರ ಸುಮಾರಿಗೆ ಹಾಸ್ಟೆಲ್ನಿಂದ ಪರಾರಿಯಾಗಿದ್ದಾರೆ. ಎಸ್ಕೇಪ್ ಆದ ವಿದ್ಯಾರ್ಥಿಗಳನ್ನು ಬೋಡಪತಿ ಚರಣ್ ತೇಜ, ಗುಡಾಲ ರಘು, ನಕ್ಕಲ ಕಿರಾ ಕುಮಾರ್ ಮತ್ತು ಕಾರ್ತಿಕ್ ಎಂದು ಪತ್ತೆ ಹಚ್ಚಲಾಗಿದೆ.
ಇನ್ನೂ, ಈ ವಿಚಾರ ತಿಳಿಯುತ್ತಿದ್ದಂತೆ ವಿದ್ಯಾರ್ಥಿಗಳ ಪೋಷಕರು ಕಂಗಾಲಾಗಿದ್ದಾರೆ. ಮಕ್ಕಳು ನಾಪತ್ತೆಯಾಗಿರುವವರ ಕುರಿತು ಪೋಷಕರು ಎಂಆರ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಾಪತ್ತೆಯಾಗಿರುವ ವಿದ್ಯಾರ್ಥಿಗಳ ಪತ್ತೆಗೆ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ. ಇದಾದ ಬಳಿಕ ಮಂಗಳವಾರ ರಾತ್ರಿ ವಿದ್ಯಾರ್ಥಿಗಳನ್ನು ವಿಜಯವಾಡದಲ್ಲಿ ಪತ್ತೆ ಹಚ್ಚಿ, ಮರಳಿ ವೈಜಾಗ್ಗೆ ಕರೆತರುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
‘ಲಕ್ಕಿ ಬಾಸ್ಕರ್’ ಕಥೆಯೂ ಬ್ಯಾಂಕಿನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುವ ಮಧ್ಯಮ ವರ್ಗದ ಬಾಸ್ಕರ್ ಎಂಬ ವ್ಯಕ್ತಿಯ ಸುತ್ತ ಕಥೆಯನ್ನು ರೂಪಿಸಲಾಗಿದೆ. ವ್ಯವಸ್ಥೆಯಲ್ಲಿನ ನ್ಯೂನತೆಗಳ ಬಗ್ಗೆ ಅವನು ಕಂಡುಕೊಂಡ ನಂತರ ಮತ್ತು ಹಣ ವರ್ಗಾವಣೆಯ ಅಪಾಯಕಾರಿ ಜಗತ್ತಿಗೆ ಪ್ರವೇಶಿಸಿದಾಗ ಸಂಘರ್ಷ ಸಂಭವಿಸುತ್ತದೆ. ವೆಂಕಿ ಅಟ್ಲೂರಿ ನಿರ್ದೇಶನದ, ‘ಲಕ್ಕಿ ಬಾಸ್ಖರ್’ ದುಲ್ಕರ್ ಸಲ್ಮಾನ್ ಮತ್ತು ಮೀನಾಕ್ಷಿ ಚೌಧರಿ ನಾಯಕರಾಗಿದ್ದಾರೆ. ಈ ಸಿನಿಮಾ ನೋಡಿದ ಪ್ರೇಕ್ಷಕರು ಅದ್ಭುತ ಪ್ರತಿಕ್ರಿಯೆಯನ್ನು ನೀಡಿದ್ದು, ಸೂಪರ್ ಹಿಟ್ ಚಿತ್ರವಾಗಿ ಹೊರ ಹೊಮ್ಮಿದೆ.