ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಅಗ್ನಿಪಥ್’ ಯೋಜನೆಯಡಿ ಭಾರತೀಯ ವಾಯುಪಡೆ ನೇಮಕಾತಿಗಾಗಿ ಇಂದು ಮೊದಲ ಪರೀಕ್ಷೆ ದೇಶದಾದ್ಯಂತ ಬಿಗಿ ಭದ್ರತೆಯಲ್ಲಿ ಶುರುವಾಗಿದೆ. ದೆಹಲಿ, ಕಾನ್ಪುರ, ಪಾಟ್ನಾ ಸೇರಿದಂತೆ ದೇಶದಾದ್ಯಂತ ಹಲವೆಡೆ ಪರೀಕ್ಷೆ ನಡೆಸಲಾಗುತ್ತಿದೆ. ಇಂದು ಭಾರತೀಯ ವಾಯುಸೇನೆಯಲ್ಲಿ ನೇಮಕಾತಿಗಾಗಿ ಮೊದಲ ಪರೀಕ್ಷೆಗೆ ಅದ್ಧೂರಿ ವ್ಯವಸ್ಥೆ ಮಾಡಲಾಗಿದೆ. ಈ ಪರೀಕ್ಷೆಯನ್ನು ಇಂದಿನಿಂದ (ಜುಲೈ 24) ಮತ್ತು ಈ ತಿಂಗಳ 31 ರವರೆಗೂ ದೇಶಾದ್ಯಂತ ನಡೆಯಲಿದ್ದು, ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಎಲ್ಲಾ ಪರೀಕ್ಷಾ ಕೇಂದ್ರಗಳು ಸಿಸಿಟಿವಿ ಮತ್ತು ಡ್ರೋನ್ಗಳ ಕಣ್ಗಾವಲಿನಲ್ಲಿವೆ. 11 ಕೇಂದ್ರಗಳಲ್ಲಿ ಇಂದು ಅಗ್ನಿವೀರ್ ಪರೀಕ್ಷೆಗಳು ನಡೆಯುತ್ತಿದ್ದು, ಈ ಪೈಕಿ 6 ಕಾನ್ಪುರ ಔಟರ್ ನಲ್ಲಿದ್ದು ಇಂದು ಈ ಪರೀಕ್ಷೆಯು ಮೂರು ಪಾಳಿಯಲ್ಲಿ ನಡೆಯಲಿದೆ. ಪ್ರತಿ ಪಾಳಿಯಲ್ಲಿ 625 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಒಟ್ಟು ಇಂದು 31,875 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಭಾರತೀಯ ವಾಯುಪಡೆಯು ಅಗ್ನಿವೀರ್ ನೇಮಕಾತಿ ಯೋಜನೆಯಡಿ 7,49,899 ಅರ್ಜಿಗಳನ್ನು ಸ್ವೀಕರಿಸಿದೆ. ಮೂರು ಪಡೆಗಳಲ್ಲಿ ನೇಮಕಾತಿಗಾಗಿ ಅಗ್ನಿಪಥ್ ಯೋಜನೆಗೆ ಜೂನ್ 14 ರಂದು ಕೇಂದ್ರ ಸಚಿವ ಸಂಪುಟ ತನ್ನ ಒಪ್ಪಿಗೆ ನೀಡಿದೆ.