ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಜಾರಿಗೆ ತರಲಾಗಿದ್ದ ʼಅಗ್ನಿಪಥʼ ಯೋಜನೆಯ ನೇಮಕಾತಿಯ ಗರಿಷ್ಟ ವಯೋಮಿತಿಯನ್ನು 23 ವರ್ಷಕ್ಕೆ ಏರಿಸಿ ಸರ್ಕಾರ ಹೊಸ ಆದೇಶ ಹೊರಡಿಸಿದೆ.
ದೇಶಸೇವೆಗೆ ಉತ್ಸುಕರಾಗಿರುವ ಯುವಕರಿಗೆ ರಕ್ಷಣಾಪಡೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವ ದೃಷ್ಟಿಯಿಂದ ಅಗ್ನಿಪಥ ಯೋಜನೆಯನ್ನು ಇತ್ತೀಚಿಗಷ್ಟೇ ಜಾರಿಗೆ ತರಲಾಗಿತ್ತು. ಆದರೆ ಬಿಹಾರ, ಹರಿಯಾಣ ಮುಂತಾದ ಪ್ರದೇಶಗಳಲ್ಲಿ ಅಗ್ನಿಪಥವನ್ನು ವಿರೋಧಿಸಿ ಹಲವಾರು ರಕ್ಷಣಾ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದರು. ಕೆಲವೆಡೆ ರೈಲುಗಳಿಗೆ ಕಲ್ಲುತೂರಾಟ ನಡೆದಿತ್ತು. ಪ್ರತಿಭಟನೆ ತೀವ್ರ ಸ್ವರೂಪವನ್ನು ಪಡೆದುಕೊಂಡಿತ್ತು. ಸರಿಯಾದ ಪಿಂಚಣಿ, ಉದ್ಯೋಗ ಭರವಸೆಗಳಿಲ್ಲ ಎಂದು ಹಲವಾರು ರಕ್ಷಣಾ ಅಭ್ಯರ್ಥಿಗಳು ಅಗ್ನಿಪಥವನ್ನು ವಿರೋಧಿಸಿದ್ದರು.
ಈ ಹಿನ್ನೆಲೆಯಲ್ಲಿ ಪ್ರಸ್ತುತ ಅಗ್ನಿವೀರರ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ತಂದಿರುವ ಸರ್ಕಾರವು ಗರಿಷ್ಟವಯೋಮಿತಿಯನ್ನು 21 ವರ್ಷಗಳಿಂದ 23 ವರ್ಷಕ್ಕೆ ಏರಿಕೆ ಮಾಡಿದೆ. ಕಳೆದ ಎರಡು ವರ್ಷಗಳಲ್ಲಿ ಯಾವುದೇ ಸೇನಾ ನೇಮಕಾತಿ ನಡೆದಿಲ್ಲದಿರುವುದರಿಂದ ಈ ಒಂದು ಬಾರಿ ಗರಿಷ್ಟ ವಯೋಮಿತಿಯಲ್ಲಿ ವಿನಾಯಿತಿ ನೀಡಲಾಗಿದೆ. ಈ ಕುರಿತು ಪಿಐಬಿ ಟ್ವೀಟ್ ಮಾಡಿದ್ದು “2022ರ ನೇಮಕಾತಿ ಪ್ರಕ್ರಿಯೆಯಲ್ಲಿ ಒಂದು ಬಾರಿ ವಿನಾಯಿತಿ ನೀಡಲು ನಿರ್ಧರಿಸಲಾಗಿದ್ದು 2022 ಕ್ಕೆ ಅಗ್ನಿಪಥ್ ಯೋಜನೆಗೆ ನೇಮಕಾತಿ ಪ್ರಕ್ರಿಯೆಯ ಗರಿಷ್ಠ ವಯಸ್ಸಿನ ಮಿತಿಯನ್ನು 23 ವರ್ಷಗಳಿಗೆ ಹೆಚ್ಚಿಸಲಾಗಿದೆ.” ಎಂದು ಟ್ವೀಟ್ ಮಾಡಿದೆ.