February 20, 2026
Friday, February 20, 2026
spot_img

ಔರಾದ್‌ನಲ್ಲಿ ಕೃಷಿ ಕ್ರಾಂತಿ: ವಾಲ್ಮೀಕಿ ನಿಗಮದಡಿ ರೈತರಿಗೆ ಕೊಳವೆಬಾವಿ ಸಾಮಗ್ರಿ ಹಸ್ತಾಂತರ

ಹೊಸದಿಗಂತ ಬೀದರ್

ಕ್ಷೇತ್ರದ ರೈತರ ಆರ್ಥಿಕ ಸುಧಾರಣೆ ಹಾಗೂ ಕೃಷಿ ಚಟುವಟಿಕೆಗಳಿಗೆ ವೇಗ ನೀಡುವ ಉದ್ದೇಶದಿಂದ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ. ಚವ್ಹಾಣ್ ಅವರು ಬುಧವಾರ ಅಧಿಕೃತವಾಗಿ ಮೋಟಾರು ಮತ್ತು ಪೈಪುಗಳನ್ನು ವಿತರಿಸಿದರು.

ಪಟ್ಟಣದ ಶಾಸಕರ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ಒಟ್ಟು 14 ಫಲಾನುಭವಿ ರೈತರಿಗೆ ಕೊಳವೆ ಬಾವಿಗೆ ಅವಶ್ಯಕವಿರುವ ಹೈ-ಪವರ್ ಮೋಟಾರು, ಗುಣಮಟ್ಟದ ಪೈಪುಗಳು ಹಾಗೂ ತಂತಿ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಹಸ್ತಾಂತರಿಸಲಾಯಿತು.

ಈ ವೇಳೆ ಮಾತನಾಡಿದ ಶಾಸಕ ಪ್ರಭು ಚವ್ಹಾಣ್ ಅವರು, “ಕ್ಷೇತ್ರದ ಸಮಗ್ರ ಅಭಿವೃದ್ಧಿ ಮತ್ತು ರೈತರ ಕೈ ಬಲಪಡಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ಸರ್ಕಾರದ ಪ್ರತಿಯೊಂದು ಸೌಲಭ್ಯವೂ ಅರ್ಹರಿಗೆ ತಲುಪಬೇಕು ಎಂಬ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ರೈತರು ಈ ಆಧುನಿಕ ಉಪಕರಣಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು,” ಎಂದು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ತಾಲೂಕು ಅಭಿವೃದ್ಧಿ ಅಧಿಕಾರಿ ಸೋಮಶೇಖರ, ಸ್ಥಳೀಯ ಜನಪ್ರತಿನಿಧಿಗಳು, ಪ್ರಮುಖ ಮುಖಂಡರು ಹಾಗೂ ಫಲಾನುಭವಿ ರೈತರು ಭಾಗವಹಿಸಿದ್ದರು. ಯೋಜನೆಯ ಲಾಭ ಪಡೆದ ರೈತರು ಶಾಸಕರಿಗೆ ಮತ್ತು ನಿಗಮಕ್ಕೆ ಕೃತಜ್ಞತೆ ಸಲ್ಲಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !